ವಾಷಿಂಗ್ಟನ್: ಭಾರತೀಯರು ಮತ್ತು ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳ ಮೇಲಿನ ದಾಳಿಗಳನ್ನು ತಡೆಯಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಆಡಳಿತವು ಶ್ರಮಿಸುತ್ತಿದೆ ಎಂದು ಶ್ವೇತಭವನ ಹೇಳಿದೆ.
ದೇಶದ ವಿವಿಧ ಭಾಗಗಳಲ್ಲಿ ಭಾರತೀಯರು ಮತ್ತು ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳ ಮೇಲೆ ನಡೆದಿರುವ ದಾಳಿಗಳ ನಡುವೆಯೇ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಅವರು ಈ ಹೇಳಿಕೆ ಮಾಡಿದ್ದಾರೆ.
'ಹಿಂಸಾಚಾರಿಗಳಿಗೆ ಯಾವುದೇ ಕ್ಷಮೆ ಇಲ್ಲ, ಅದರಲ್ಲೂ ಜನಾಂಗ, ಲಿಂಗ, ಧರ್ಮ ಅಥವಾ ಯಾವುದೇ ಇತರ ಅಂಶಗಳ ಆಧಾರದ ಮೇಲೆ ನಡೆಯುವ ಹಿಂಸಾಚಾರಗಳನ್ನು ನಾವು ಸಹಿಸಲ್ಲ. ಇಂತಹ ಘಟನೆಗಳು ಅಮೆರಿಕದಲ್ಲಿ ಸ್ವೀಕಾರಾರ್ಹವಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಕಿರ್ಬಿ ಉತ್ತರಿಸಿದ್ದಾರೆ.
‘ಅಧ್ಯಕ್ಷ ಜೋ ಬೈಡನ್ ಮತ್ತು ನಮ್ಮ ಆಡಳಿತವು ಆ ರೀತಿಯ ದಾಳಿಗಳನ್ನು ತಡೆಯಲು ಶ್ರಮಿಸುತ್ತಿದೆ. ಈ ಸಂಬಂಧ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಜಾರ್ಜಿಯಾ ರಾಜ್ಯದ ಲಿಥೋನಿಯಾದ ಡಿಪಾರ್ಟ್ಮೆಂಟಲ್ ಸ್ಟೋರ್ನಲ್ಲಿ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದ ವಿವೇಕ್ ಸೈನಿ ಎಂಬ ಭಾರತೀಯ ವಿದ್ಯಾರ್ಥಿ ಜನವರಿಯಲ್ಲಿ ಮಾದಕ ವ್ಯಸನಿಯೊಬ್ಬ ನಡೆಸಿದ ಹಲ್ಲೆಯಿಂದ ಮೃತಪಟ್ಟಿದ್ದರು.
ಇಂಡಿಯಾನಾ ವೆಸ್ಲೆಯನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿ ಸೈಯದ್ ಮಜಾಹೀರ್ ಅಲಿ ಎಂಬ ವಿದ್ಯಾರ್ಥಿ ಮೇಲೂ ಫೆಬ್ರುವರಿಯಲ್ಲಿ ದಾಳಿ ನಡೆದಿತ್ತು.
ಕಳೆದ ಕೆಲ ವಾರಗಳಲ್ಲಿ ಕನಿಷ್ಠ 4 ಮಂದಿ ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳ ಹತ್ಯೆಯಾಗಿದೆ. ಇಲ್ಲಿನಾಯ್ಸ್ನ ಅರ್ಬನಾ ಶಾಂಪೇನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಅಕುಲ್ ಧವನ್ ಮತ್ತು ಪುರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ನೀಲ್ ಆಚಾರ್ಯ ಹತ್ಯೆಯಾಗಿದೆ.
ಲಿಂಡ್ನರ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಓದುತ್ತಿದ್ದ ಭಾರತದ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಬೆಣ್ಣಿಗೇರಿ ಅವರ ಮೃತದೇಹ ಒಹಿಯೊದಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು.
ಕಳೆದ ವಾರ, ಅಮೆರಿಕದ ಅಲಬಾಮದಲ್ಲಿ ಹೋಟೆಲ್ ಮಾಲೀಕ, ಭಾರತ ಮೂಲದ ಪ್ರವೀಣ್ ರಾವ್ಜಿ ಭಾಯ್ ಪಟೇಲ್ ಎಂಬವರನ್ನು ಗ್ರಾಹಕನೊಬ್ಬ ಗುಂಡಿಕ್ಕಿ ಕೊಂದಿದ್ದ.