ಸಿಂಗಪುರ: ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂಬ ಚೀನಾ ಹೇಳಿಕೆ ಹಾಸ್ಯಾಸ್ಪದ. ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಮೂರು ದಿನಗಳ ಕಾಲ ಸಿಂಗಪುರ ಪ್ರವಾಸದಲ್ಲಿರುವ ಅವರು ಎನ್ಯುಎಸ್ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್ನಲ್ಲಿ ಶನಿವಾರದಿಂದ ಉಪನ್ಯಾಸ ನೀಡಿದರು.
ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಇದೇನು ಹೊಸ ವಿಚಾರ ಅಲ್ಲ. ಈ ಕುರಿತಂತೆ ಚೀನಾ ಹೇಳಿಕೆ ಎಂದೆಂದಿಗೂ ಹಾಸ್ಯಾಸ್ಪದವಾಗಿಯೇ ಇರುತ್ತದೆ’ ಎಂದರು.
ಇದಕ್ಕೂ ಮುನ್ನ ಅವರು, ಇಲ್ಲಿನ ಯುದ್ಧ ಸ್ಮಾರಕದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿಯ (ಐಎನ್ಎ) ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.
ಸಿಂಗಪುರ ಭೇಟಿ ವೇಳೆ ಅವರು, ಪ್ರಧಾನಮಂತ್ರಿ ಲೀ ಸಿಯೆನ್ ಲೂಂಗ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.