‘ಮಠಾಧೀಶರು ರಾಜಕಾರಣಿಗಳ ಮುಖವಾಣಿಯಾಗಬಾರದು’ ಎಂಬ ಶೀರ್ಷಿಕೆಯಡಿ ಹಲವರ ಟೀಕೆ– ಟಿಪ್ಪಣಿಗಳು ಪತ್ರಿಕೆಯಲ್ಲಿ ವರದಿಯಾಗಿವೆ. ಅವುಗಳಲ್ಲಿ ‘ಕಾವಿ ತೊಟ್ಟವರು ರಾಜಕಾರಣದಿಂದ ದೂರ ಇರಲಿ’ ಎಂಬ ಟೀಕೆ ಸರಿಯೆನಿಸದು. ರಾಜಕಾರಣ ಮತ್ತು ಧರ್ಮ ಒಂದಕ್ಕೊಂದು ಬೆಸೆದುಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಿರುವ ಅಸಂಖ್ಯ ಉದಾಹರಣೆಗಳಿವೆ. ಈ ಎರಡೂ ಸ್ಥಿತಿಗಳು ಸಮಾಜಮುಖಿಯವೇ. ಇವರಲ್ಲಿಯಾರೊಬ್ಬರಿಗಾದರೂ ದಿಕ್ಕು ತೋಚದ ಪರಿಸ್ಥಿತಿ ಉಂಟಾದಾಗ, ಸಮಾಜದ ಒಳಿತಿಗಾಗಿ ಒಬ್ಬರಿಗೊಬ್ಬರು ಸಲಹೆ ಮತ್ತು ಹೆಗಲು ಕೊಡುವ ಸಂದರ್ಭ ಬಂದೇ ಬರುತ್ತದೆ. ಕಾಷಾಯ ವಸ್ತ್ರ ಧರಿಸಿ ಧರ್ಮಬೋಧನೆ ಮಾಡುವುದಕ್ಕಾಗಿಯೇ ಮಠಾಧೀಶರನ್ನು ಸೀಮಿತಗೊಳಿಸಿಬಿಟ್ಟರೆ, ದೇಶದ ರಾಜಕೀಯ ನಾಯಕರ ಲಂಗುಲಗಾಮಿಲ್ಲದ ನಡೆಯಿಂದಾಗಿ ಸಮಾಜದ ಸ್ವಾಸ್ಥ್ಯ ಮತ್ತಷ್ಟು ಹದಗೆಡಬಹುದು. ಆಗ ನೆರವಿಗೆ ಬರಬೇಕಾದವರು ಯಾರು? ದೇಶದಾದ್ಯಂತ ಸರ್ಕಾರಗಳು ಮಾಡದಿರುವ ಎಷ್ಟೋ ಸಮಾಜಮುಖಿ ಕಾರ್ಯಗಳನ್ನು ಮಠಗಳು ಮಾಡಿರುವುದು ಸತ್ಯವಲ್ಲವೇ?