ಭಾರತ ಸ್ವತಂತ್ರವಾದ ಮೇಲೆ ಭಾಷಾ ಪ್ರಾಂತ್ಯಗಳ ರಚನೆಯಾಯಿತು. ಅದಕ್ಕೆ ಮೂಲ ಕಾರಣ ಆಂಧ್ರದ ಪೊಟ್ಟಿ ಶ್ರೀರಾಮುಲು. ಈ ರಚನೆಯ ಉದ್ದೇಶ ಪ್ರಾದೇಶಿಕ ಭಾಷೆಗಳು ಉಳಿಯಬೇಕು, ಬೆಳೆಯಬೇಕು ಮತ್ತು ಅಭಿವೃದ್ಧಿ ಹೊಂದಬೇಕು ಎಂಬುದು. ಮಕ್ಕಳು ಯಾವ ಭಾಷೆಯನ್ನಾದರೂ ಕಲಿಯಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಲಿ, ಆದರೆ ಪ್ರಾದೇಶಿಕ ಭಾಷೆಗೆ ಆದ್ಯತೆ ಇರಲಿ. ಮೊದಲ ಸ್ಥಾನ ಅದಕ್ಕೇ ಇರಲಿ.
ರಾಜ್ಯ ಸರ್ಕಾರದ ತಪ್ಪಿನಿಂದ, ಕನ್ನಡಿಗರ ನಿರಭಿಮಾನ ಹಾಗೂ ತಾತ್ಸಾರದಿಂದ ಕನ್ನಡ ಈಗಾಗಲೇ ಅರ್ಧನಾಶವಾಗಿದೆ. ಇದು ಹೀಗೆಯೇ ಮುಂದುವರಿದರೆ ಪೂರ್ತಿ ನಾಶವಾಗುವ ಕಾಲ ಬಹುದೂರ ಇರಲಾರದು. ಕನ್ನಡದ ಹೆಸರಿನಲ್ಲಿ ಇಂಗ್ಲಿಷ್ ಸ್ಕೂಲ್ ನಡೆಸುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿತ್ತು. ಅವು ನಾಯಿಕೊಡೆಗಳಂತೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿವೆ.
ಸುಪ್ರೀಂಕೋರ್ಟು ಮೊದಲು ಮಾತೃಭಾಷೆ ಕಡೆಗೆ ಗಮನ ಹರಿಸಿತ್ತು. ಈಗ ಅದು ಭಾಷೆ ಆಯ್ಕೆಯ ಜವಾಬ್ದಾರಿಯನ್ನು ಮಕ್ಕಳು ಹಾಗೂ ಪೋಷಕರ ವಿವೇಚನೆಗೆ ಬಿಟ್ಟಿದೆ. ಇದು ಸಮಂಜಸವಲ್ಲ. ಕಲಿಸಿದ್ದನ್ನು ಕಲಿಯುತ್ತವೆ ಮಕ್ಕಳು. ಅವರಿಗೆ ಜವಾಬ್ದಾರಿ ಸಲ್ಲದು. ಇನ್ನು ಪೋಷಕರು ಅನ್ನ ಕೊಡುವ ಭಾಷೆಯ ಕಡೆಗೆ ಗಮನ ಹರಿಸುತ್ತಾರೆ. ಹಾಗಾದರೆ ಪ್ರಾದೇಶಿಕ ಭಾಷೆಗಳು ಉಳಿಯಲು ಸಾಧ್ಯವೇ?
ಸುಪ್ರೀಂಕೋರ್ಟು ಆದೇಶದಿಂದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಉಳಿವಿನ ಪ್ರಶ್ನೆ ಎದುರಾಗಿದೆ. ಈ ಕುರಿತು ಸುಪ್ರೀಂಕೋರ್ಟು ಮರು ಪರಿಶೀಲಿಸಲೇಬೇಕು. ಆಯ್ಕೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಬೇಕು. ಕೊಡದಿದ್ದರೆ ಎಲ್ಲಾ ರಾಜ್ಯಗಳು ಒಟ್ಟಿಗೆ ಸೇರಿ ಈ ಗಂಡಾಂತರದಿಂದ ಪಾರಾಗುವುದರ ಬಗ್ಗೆ ಯೋಚಿಸಬೇಕು.