ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಸಂಖ್ಯೆ– 17ರಲ್ಲಿರುವ ಜೆ.ಪಿ. ಪಾರ್ಕ್ ಬಹಳಷ್ಟು ಸುಂದರವಾಗಿದ್ದು, ಪ್ರಸಿದ್ಧಿಯಾಗಿದೆ. ಆದರೆ ಇತ್ತೀಚೆಗೆ ಉದ್ಯಾನಕ್ಕೆ ಕುತ್ತು ಬರುವ ಸಂದರ್ಭ ಕಾಣುತ್ತಿದೆ. ಉದ್ಯಾನದ ಕೆರೆಯ ಮಧ್ಯಭಾಗದಲ್ಲಿ ಹಾದುಹೋಗುವಂತೆ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವ ಹುನ್ನಾರ ನಡೆದಿದೆ.
ಆದರೆ ಈ ಉಪಯೋಗವಿಲ್ಲದ ರಸ್ತೆ ನಿರ್ಮಿಸುವ ಕುತಂತ್ರದಿಂದ ಮೋಹನ್ ಕುಮಾರ್ ನಗರದ ಪಾರ್ಕಿನ ಗೇಟ್ ಕಡೆ ಬೃಹದಾಕಾರವಾಗಿ ಬೆಳೆದು ನಿಂತಿರುವ 350 ಮರಗಳನ್ನು ಕಡಿಯುವ ಹುನ್ನಾರ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಮರ ಕಡಿಯಲು ಈಗಾಗಲೇ ಮರಗಳ ಮೇಲೆ ಸಂಖ್ಯೆಗಳನ್ನು ಗುರುತಿಸಿದ್ದಾರೆ. ಈಗಾಗಲೇ ಉದ್ಯಾನದ ಸುತ್ತಲಿನ ಕಾಂಪೌಂಡ್ ಅನ್ನು ಒಡೆದು ಹಾಕಿಸಿದ್ದಾರೆ. ಉದ್ಯಾನ, ಕೆರೆಗಳಲ್ಲಿ ಯಾವುದೇ ರೀತಿಯ ಶಾಶ್ವತ ಕಟ್ಟಡಗಳನ್ನು ಕಟ್ಟಬಾರದೆಂದು ಕೋರ್ಟಿನ (ದಾವೆ ಸಂಖ್ಯೆ–817/2008) ಆದೇಶವಿದ್ದರೂ ಇಲ್ಲಿ ಶಾಶ್ವತವಾದ ಕಟ್ಟಡಗಳು ತಲೆಎತ್ತುತ್ತಿವೆ. ಇದಕ್ಕೆಲ್ಲಾ ಅನುಮತಿ ಕೊಟ್ಟವರು ಯಾರು?
ಇಲ್ಲಿರುವ ಕೆರೆಯನ್ನು ಅರ್ಧಭಾಗ ಸೀಳಿ ನಿರ್ಮಿಸುತ್ತಿರುವುದು ಯಾರು? ಇವರಿಗೆ ಕೆರೆ ಹಾಳು ಮಾಡಲು ಅನುಮತಿ ಕೊಟ್ಟವರು ಯಾರು? ಪಾರ್ಕಿಗೆ ಇಷ್ಟೆಲ್ಲಾ ಧಕ್ಕೆಯಾಗುತ್ತಿದ್ದರೂ ಜೆ.ಪಿ. ಪಾರ್ಕ್ ವೆಲ್ಫೇರ್ ಅಸೋಶಿಯೇಷನ್ನ ಅಧ್ಯಕ್ಷರು, ಪದಾಧಿಕಾರಿಗಳು ನೋಡಿಕೊಂಡು ಸುಮ್ಮನಿದ್ದಾರೆ.
–ಜೆ.ಪಿ. ಪಾರ್ಕಿನ ಕ್ಷೇಮಾಭಿವೃದ್ಧಿ ಸಂಘ,
ಪರಿಸರ ಹೋರಾಟ ಸಮಿತಿ, ಪರಿಸರ ಜಾಗೃತಿ ಸಮುದಾಯ.