ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಂದಿನಿ ಬಡಾವಣೆಯಲ್ಲಿದ್ದ ರಾಜಕಾಲುವೆ ಮುಚ್ಚಿ ಅಲ್ಲಿ ಬಹು ಅಂತಸ್ತಿನ ಕಟ್ಟಡ ಕಟ್ಟಲು ಅನುಮತಿ ನೀಡಿದೆ. ಇದರಿಂದಾಗಿ ಈ ಬಡಾವಣೆ ನಿವಾಸಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ. ಚರಂಡಿಗಳಲ್ಲಿ ನೀರು ಸರಿಯಾಗಿ ಹರಿಯದೇ ಇರುವುದರಿಂದ ಕೊಳಚೆ ನೀರೆಲ್ಲಾ ಇಲ್ಲಿನ 6ನೇ ಸರ್ಕಲ್ ರಸ್ತೆ ಮೇಲೆ ಹರಿಯುತ್ತಿದೆ.
ಇದರ ಜತೆಗೆ ಈ ಸ್ಥಳದ ಸುತ್ತಮುತ್ತಲಿನ ಜಾಗವೆಲ್ಲಾ ಕಸ ಸಂಗ್ರಹದ ಸ್ಥಳವಾಗಿ ಪರಿವರ್ತನೆಯಾಗಿದೆ. ಇಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಈ ಸಂಗತಿಯನ್ನು ಬಿಬಿಎಂಪಿ ಹಾಗೂ ಬಿಡಬ್ಲ್ಯುಎಸ್ಎಸ್ಬಿ ಎಂಜಿನಿಯರ್ ಅವರ ಗಮನಕ್ಕೆ ತಂದರೂ ಯಾವ ಪ್ರಯೋಜನವೂ ಆಗಲಿಲ್ಲ. ಹಾಗಾಗಿ, ಇಲ್ಲಿನ ನಿವಾಸಿಗಳು ಸಮಸ್ಯೆಗೆ ಪರಿಹಾರ ಸಿಗದೆ ಒದ್ದಾಡುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಈ ಸಮಸ್ಯೆ ಬಗೆಹರಿಸಲಿ.