ದಾವಣಗೆರೆ: ದಾವಣಗೆರೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯಾಗಿಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಅಶ್ವತಿ ಅವರು ಹೊಸ ಅಸ್ತ್ರ ಕಂಡುಕೊಂಡಿದ್ದಾರೆ.
ಯಾವ ಊರಲ್ಲಿ ಶೌಚಾಲಯ ಕಟ್ಟಿಸಿಲ್ಲ, ಶೌಚಾಲಯ ಇದ್ದರೂ ಅದನ್ನು ಬಳಸುತ್ತಿಲ್ಲ ಎಂಬ ಮಾಹಿತಿಗಳನ್ನು ಕಲೆ ಹಾಕಿರುವ ಅವರು, ಇಲಾಖೆ ಅಧಿಕಾರಿಗಳ ತಂಡ ಕಟ್ಟಿಕೊಂಡು ಆ ಗ್ರಾಮಕ್ಕೆ ಮುಂಜಾನೆಯೇ ಭೇಟಿ ಕೊಡುತ್ತಾರೆ.
ಚೊಂಬು ಹಿಡಿದು ಹೊರಟವರನ್ನು ಹಿಂಬಾಲಿಸುತ್ತಾರೆ. ಮನೆಯಲ್ಲೇ ಶೌಚಾಲಯ ಇದ್ದರೂ ಏಕೆ ಬಳಸುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ. ಅವರನ್ನು ಹಿಂದಕ್ಕೆ ಕರೆತಂದು ಶೌಚಾಲಯದಲ್ಲಿ ಕೂರಿಸುತ್ತಾರೆ.
ಅದರ ಬಾಗಿಲು ತಾವೇ ಹಾಕಿ ಅವರು ಶೌಚ ಮುಗಿಸಿಕೊಂಡು ಬರುವವರೆಗೂ ಶೌಚಾಲಯದ ಎದುರು ಕುರ್ಚಿ ಹಾಕಿ ಕೂರುತ್ತಾರೆ. ಅವರು ಅಲ್ಲಿಂದ ಹೊರಬರುತ್ತಿದ್ದಂತೆ ಅಧಿಕಾರಿಗಳ ಜೊತೆ ಚಪ್ಪಾಳೆ ತಟ್ಟಿ ಅಭಿನಂದಿಸುತ್ತಾರೆ.
ಹೀಗೆ ಮಾಡುತ್ತಿದ್ದ ಸಿಇಒ ಮತ್ತು ತಂಡ ತಮ್ಮೂರಿಗೂ ಬರುತ್ತದೆಂಬ ಮಾಹಿತಿ ತಿಳಿದ ವ್ಯಕ್ತಿಯೊಬ್ಬರು ಕಾರಿನಲ್ಲಿ ಚೊಂಚು ಇಟ್ಟುಕೊಂಡು ಶೌಚಕ್ಕೆ ತೆರಳುತ್ತಿದ್ದರು. ಹೇಗೋ ಈ ವಿಷಯ ತಿಳಿದ ಸಿಇಒ, ಅವರನ್ನು ಬೆನ್ನತ್ತಿ ಹೋದರು. ಆ ವ್ಯಕ್ತಿ ಕಾರಿನ ವೇಗವನ್ನು ಇನ್ನಷ್ಟು ಹೆಚ್ಚು ಮಾಡಿ ಪಕ್ಕದೂರಿಗೆ ಪರಾರಿಯಾದ ಪ್ರಸಂಗ ನಡೆದಿದೆ.