ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐತಿಹಾಸಿಕ ಸಾಧಕ’ ಅಜಿತ್ ಅಸ್ತಂಗತ

Last Updated 16 ಆಗಸ್ಟ್ 2018, 4:27 IST
ಅಕ್ಷರ ಗಾತ್ರ

ಮುಂಬೈ: ಹಿರಿಯ ಕ್ರಿಕೆಟಿಗ ಅಜಿತ್ ವಾಡೇಕರ್ (77) ಅವರು ಬುಧವಾರ ರಾತ್ರಿ ನಿಧನರಾದರು.

ಕೆಲಕಾಲದಿಂದ ಅಸ್ವಸ್ಥರಾಗಿದ್ದ ಅವರು ಮುಂಬೈನ ಜಸ್‌ಲೋಕ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಪತ್ನಿ ರೇಖಾ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.

1971ರಲ್ಲಿ ಇಂಗ್ಲೆಂಡ್ ತಂಡವನ್ನು ಅದರ ನೆಲದಲ್ಲಿಯೇ ಸೋಲಿಸಿದ್ದ ಭಾರತ ತಂಡಕ್ಕೆ ವಾಡೇಕರ್ ನಾಯಕತ್ವ ವಹಿಸಿದ್ದರು. ಆ ಕಾಲದ ಕ್ರಿಕೆಟ್‌ನಲ್ಲಿ ದೈತ್ಯರೆಂದೇ ಕರೆಸಿಕೊಳ್ಳುತ್ತಿದ್ದ ವೆಸ್ಟ್‌ ಇಂಡೀಸ್ ತಂಡವನ್ನೂ ಅವರದ್ದೇ ನೆಲದಲ್ಲಿ ವಾಡೇಕರ್ ನಾಯಕತ್ವದ ತಂಡವು ಸೋಲಿಸಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಂಟು ವರ್ಷ ಬೆಳಗಿದ್ದ ಅವರು 37 ಟೆಸ್ಟ್ ಪಂದ್ಯಗಳನ್ನು ಆಡಿದ್ದು 2113 ರನ್‌ ಗಳಿಸಿದ್ದರು. 1974ರಲ್ಲಿ ಭಾರತ ಏಕದಿನ ಕ್ರಿಕೆಟ್ ತಂಡದ ಪ್ರಥಮ ನಾಯಕರಾಗಿದ್ದರು. ಆಗ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಎರಡೂ ಪಂದ್ಯಗಳಲ್ಲಿ ಭಾರತ ಸೋತಿತ್ತು. ಆಗ ವಾಡೇಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.‌

ಎಡಗೈ ಬ್ಯಾಟ್ಸ್‌ಮನ್ ಅಜಿತ್ 1958ರಲ್ಲಿ ಮುಂಬೈ ತಂಡದ ಪರ ಪ್ರಥಮದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 1966ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.

ವ್ಯವಸ್ಥಾಪಕ, ಆಯ್ಕೆಗಾರ: 90ರ ದಶಕದಲ್ಲಿ ಭಾರತ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ತಂಡವು 1996 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತ್ತು.

ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಕ್ರಿಕೆಟಿಗ, ವ್ಯವಸ್ಥಾಪಕ ಮತ್ತು ಆಯ್ಕೆಗಾರನಾಗಿ ಕಾರ್ಯನಿರ್ವಹಿಸಿದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದ್ದು. ಲಾಲಾ ಅಮರನಾಥ್ ಮತ್ತು ಚಂದು ಬೋರ್ಡೆ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಐಕ್ಯಾಡ್ ಸಂಸ್ಥಾಪಕ: ಕ್ರಿಕೆಟ್‌ ಬದುಕಿನಿಂದ ನಿವೃತ್ತರಾದ ನಂತರ 1988ರಲ್ಲಿ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಸಂಸ್ಥೆ (ಐಕ್ಯಾಡ್‌) ಆರಂಭಿಸಿದ್ದರು. ಆರಂಭದಲ್ಲಿ ಈ ಸಂಸ್ಥೆಯಡಿ ನಾಲ್ಕು ತಂಡಗಳು ಇದ್ದವು. ಈಗ 24ಕ್ಕೂ ಅಧಿಕ ತಂಡಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT