ಬೆಂಗಳೂರು: ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಮತ್ತು ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರ ಸಹಾಯಧನ ಆಯ್ಕೆ ಸಲಹಾ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅಧ್ಯಕ್ಷತೆಯಲ್ಲಿ ಒಂಬತ್ತು ಸದಸ್ಯರ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು 2011ನೇ ಸಾಲಿನಲ್ಲಿ ಸೆನ್ಸಾರ್ ಆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳನ್ನು ವೀಕ್ಷಿಸಿ, ಅತ್ಯುತ್ತಮ ಚಿತ್ರ, ಶ್ರೇಷ್ಠ ಕಲಾವಿದರು ಮತ್ತು ತಂತ್ರಜ್ಞರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಿದೆ.
ಚಿತ್ರ ನಿರ್ದೇಶಕ ರತ್ನಜ, ನಾಟಕಕಾರ ಕೆ.ವೈ.ನಾರಾಯಣ ಸ್ವಾಮಿ, ನಟಿ ಭವ್ಯ, ನಿರ್ಮಾಪಕ ಸುರೇಶ್ (ಮಾರ್ಸ್), `ಪ್ರಜಾವಾಣಿ' ಮುಖ್ಯ ಉಪಸಂಪಾದಕ ಎನ್.ವಿಶಾಖ, ಹಿರಿಯ ಕಲಾವಿದ ಸಿ.ಚಂದ್ರಶೇಖರ್, ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅವರು ಸಮಿತಿಯ ಸದಸ್ಯರಾಗಿದ್ದಾರೆ. ವಾರ್ತಾ ಇಲಾಖೆ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಹಾಯಧನ ಸಮಿತಿ: ಚಿತ್ರ ನಿರ್ಮಾಪಕ ಎಸ್.ಡಿ.ಅಂಕಲಗಿ ಅಧ್ಯಕ್ಷತೆಯಲ್ಲಿ 9 ಸದಸ್ಯರ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರ ಸಹಾಯಧನ ಆಯ್ಕೆ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು 2010-11ನೇ ಸಾಲಿನಲ್ಲಿ ರಾಜ್ಯದಲ್ಲಿ ನಿರ್ಮಾಣವಾದ ಹಾಗೂ ಸೆನ್ಸಾರ್ ಆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳನ್ನು ವೀಕ್ಷಿಸಿ, ಅರ್ಹ ಚಲನಚಿತ್ರಗಳನ್ನು ಸಹಾಯಧನಕ್ಕಾಗಿ ಆಯ್ಕೆ ಮಾಡಲಿದೆ.
ಪತ್ರಕರ್ತ ಬಿ.ಎಸ್.ಸುಬ್ರಹ್ಮಣ್ಯ, ನಿರ್ದೇಶಕರಾದ ಉಮಾಶಂಕರ್ ಸ್ವಾರ ಮತ್ತು ಕೆ. ಚನ್ನಗಂಗಪ್ಪ, ರಂಗಕರ್ಮಿ ಡಾ ಸುಜಾತ ಜಂಗಮ ಶೆಟ್ಟಿ, ಚಿತ್ರ ಸಾಹಿತಿ ಕುಣಿಗಲ್ ನಾಗಭೂಷಣ್, ಹಿರಿಯ ಕಲಾವಿದ ಅಮರದೇವ, ಪತ್ರಿಕಾ ಅಂಕಣಕಾರ .ಎಸ್.ಮನೋಹರ್ ಅವರು ಸಮಿತಿಯ ಸದಸ್ಯರಾಗಿದ್ದಾರೆ. ವಾರ್ತಾ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.