ಬೆಂಗಳೂರು: ಹೈಕೋರ್ಟ್ಗೆ ಇದೇ 20ರಿಂದ 31ರವರೆಗೆ ಚಳಿಗಾಲದ ರಜೆ ಘೋಷಿಸಲಾಗಿದೆ. ಆದರೆ, 21, 23, 28 ಹಾಗೂ 30ರಂದು ರಜಾಕಾಲದ ಪೀಠ ಕಾರ್ಯ ನಿರ್ವಹಿಸಲಿದೆ. ಅಂದು ತುರ್ತಾಗಿ ನಡೆಯಬೇಕಿರುವ ಪ್ರಕರಣಗಳ ವಿಚಾರಣೆಯನ್ನು ಮಾತ್ರ ನ್ಯಾಯಮೂರ್ತಿಗಳು ಕೈಗೆತ್ತಿಕೊಳ್ಳಲಿದ್ದಾರೆ.
ಆದರೆ ಈ ಅವಧಿಯಲ್ಲಿ ಧಾರವಾಡ ಹಾಗೂ ಗುಲ್ಬರ್ಗ ಸಂಚಾರಿ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ಪೀಠದ ವ್ಯಾಪ್ತಿಯಲ್ಲಿನ ತುರ್ತು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿಯೇ ನಡೆಸಲಾಗುವುದು.
ವಿಶೇಷ ಕಲಾಪ: ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ (ಡಿ.17) ವಿಶೇಷ ಕಲಾಪ ನಡೆಸಲಿದೆ. ಕಳೆದ ವಾರ ನ್ಯಾ. ಕೇಹರ್ ಅವರು ನಾಲ್ಕು ದಿನಗಳ ಕಾಲ ಸಂಚಾರಿ ಪೀಠಗಳಲ್ಲಿ ಕಲಾಪ ನಡೆಸಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಬದಲಾಗಿ ಈ ಕಲಾಪ ನಡೆಸುವುದಾಗಿ ಅವರು ತಿಳಿಸಿದ್ದಾರೆ.
‘ವಕೀಲರು ಶುಕ್ರವಾರ ಕಲಾಪಕ್ಕೆ ಹಾಜರಾಗುವುದು ಕಡ್ಡಾಯವೇನಲ್ಲ. ಒಂದು ವೇಳೆ ಯಾವುದಾದರೂ ಕಾರಣಕ್ಕೆ ಬರಲು ಆಗದಿದ್ದರೆ, ಅಂತಹ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಗುವುದು. ವಕೀಲರು ಹಾಗೂ ಕಕ್ಷಿದಾರರು ಹೆದರಬೇಕಾದ ಅಗತ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.