ಕುಶಾಲನಗರ: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೆನೆಗುದ್ದಿಗೆ ಬಿದ್ದಿರುವ ಕಾಮಗಾರಿ ಅಭಿವೃದ್ಧಿಗಾಗಿ ರೂ.60ಲಕ್ಷ ಅನುದಾನ ಮೀಸಲಿಡಲು ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಧ್ಯಕ್ಷೆ ಎಸ್.ಪಿ.ಚರಿತಾ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ವಿಶೇಷ ಸಭೆಯಲ್ಲಿ 2012-13ನೇ ಸಾಲಿನ 13ನೇ ಹಣಕಾಸು ಯೋಜನೆ ಅನುದಾನ ಹಾಗೂ ಎಸ್ಎಫ್ಸಿ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಯಿತು.
13ನೇ ಹಣಕಾಸು ಯೋಜನೆ ಅನುದಾನ ಹಾಗೂ ಎಸ್ಎಫ್ಸಿಯಿಂದ ಬರುವ ರೂ.1.20 ಕೋಟಿ ಅನುದಾನದಲ್ಲಿ ಪಂಚಾಯಿತಿ ವತಿಯಿಂದ ಕೈಗೊಂಡು ಅರ್ಧಕ್ಕೆ ಸ್ಥಗಿತಗೊಂಡಿರುವ ಖಾಸಗಿ ಬಸ್ ನಿಲ್ದಾಣ ಕಾಮಗಾರಿ, ಮಾರುಕಟ್ಟೆ ಕಾಮಗಾರಿ, ಐಬಿ ರಸ್ತೆ ಅಗಲೀಕರಣ ಕಾಮಗಾರಿಗೆ ರೂ.60 ಲಕ್ಷ ಅನುದಾನವನ್ನು ಕ್ದಾುರಿಸಲು ಸಭೆ ತೀರ್ಮಾನಿಸಿತು.
ಉಳಿದ ರೂ.60 ಲಕ್ಷ ಅನುದಾನವನ್ನು ಪಟ್ಟಣದ 12 ಬಡಾವಣೆಗಳಿಗೂ ಸಮನಾಗಿ ಹಂಚುವ ಮೂಲಕ ಅಗತ್ಯ ಮೂಲ ಕಲ್ಪಿಸಲು ನಿರ್ಧರಿಸಲಾಯಿತು.
ಅತಿ ಕಿರಿದಾಗಿರುವ ಐಬಿ ರಸ್ತೆಯ ಅಗಲೀಕರಣ ಕೈಗೊಳ್ಳುವ ಮೂಲಕ ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಎಚ್.ಜೆ.ಕರಿಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮುಖ್ಯಾಧಿಕಾರಿ ಡಿಸೋಜ, ಕಿರಿಯ ಅಭಿಯಂತರ ಶ್ಯಾಮ್ ಹಾಗೂ ಸದಸ್ಯರು ಹಾಜರಿದ್ದರು.