ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 2014–15ನೇ ಸಾಲಿನಲ್ಲಿ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ವಿತರಿಸುವ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿತು.
ಶೇ 25 ಮೀಸಲಾತಿಯಡಿ ಈ ಸಲ ರಾಜ್ಯದಾದ್ಯಂತ 1,08,344 ಸೀಟುಗಳು ಲಭ್ಯ ಇವೆ. ಅರ್ಜಿ ವಿತರಿಸುವ ಪ್ರಕ್ರಿಯೆ ಫೆ. 7ರ ವರೆಗೆ ಮುಂದುವರಿಯಲಿದೆ.
ನಗರದ ಬಹುತೇಕ ಶಾಲೆಗಳಲ್ಲಿ ಮೊದಲ ದಿನ ಅರ್ಜಿ ವಿತರಿಸುವ ಪ್ರಕ್ರಿಯೆ ಗೊಂದಲದಿಂದ ಕೂಡಿತ್ತು. ಆರ್ಟಿಇ ಅಡಿಯಲ್ಲಿ ಶಾಲೆಗಳಲ್ಲಿ ಲಭ್ಯ ಇರುವ ಸೀಟುಗಳ ಸಂಖ್ಯೆಯನ್ನು ಆಡಳಿತ ಮಂಡಳಿಗಳು ಪ್ರಕಟಿಸಿಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಅನೇಕ ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ರಾಜಾಜಿನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದೂರು ಸಲ್ಲಿಸಲು ಬಂದ ಹಿರಿಯ ನಾಗರಿಕರೊಬ್ಬರು ಖಾಸಗಿ ಶಾಲೆಗಳ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.