ವಿಜಾಪುರ: ಉತ್ತರಪ್ರದೇಶದ ಹುಡು ಗರ ಸ್ಮ್ಯಾಷ್ಗಳ ರಭಸಕ್ಕೆ 37ನೇ ರಾಷ್ಟ್ರೀಯ ಜೂನಿಯರ್ ವಾಲಿ ಬಾಲ್ ಚಾಂಪಿಯನ್ಷಿಪ್ ಗೆಲ್ಲುವ ಆತಿಥೇಯ ಕರ್ನಾಟಕದ ಬಾಲಕರ ತಂಡದ ಕನಸು ನುಚ್ಚುನೂರಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಬಾಲಕರ ವಿಭಾಗದ ಫೈನಲ್ ನಲ್ಲಿ ಉತ್ತರಪ್ರದೇಶ 27-25, 25-19, 25-14ರಲ್ಲಿ ಕರ್ನಾಟಕ ವನ್ನು ಮಣಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಇದಕ್ಕೂ ಮುನ್ನ ನಡೆದ ಬಾಲಕಿಯರ ಫೈನಲ್ನಲ್ಲಿ ಕೇರಳ ತಂಡವು 25-10, 25-15, 25-16ರಿಂದ ಕಳೆದ ಬಾರಿಯ ಚಾಂಪಿಯನ್ ತಮಿಳುನಾಡಿಗೆ ಸೋಲಿನ ಹಾದಿ ತೋರಿಸಿತು.
ರನ್ನರ್ಸ್ಅಪ್ ಕರ್ನಾಟಕ: ಆತಿ ಥೇಯ ಬಾಲಕರಿಗೆ ಬೆಂಬಲ ನೀಡಲು ಸೇರಿದ್ದ ಅಪಾರ ಜನಸ್ತೋಮದ ಕೇಕೆ, ಚಪ್ಪಾಳೆಗಳು, ಡ್ರಮ್ಗಳ ಸದ್ದಿಗೆ ಬೆದರದ ಉತ್ತರಪ್ರದೇಶದ ರವಿಕಾಂತ ಬಳಗ ತಮ್ಮ ಬಾಹುಬಲ ಮೆರೆಯಿತು.ಮೊದಲ ಸೆಟ್ನಲ್ಲಿ ಬಹುತೇಕ ಸಮ ಬಲದ ಪ್ರದರ್ಶನ ಮೂಡಿಬಂತು. ಒಂದು ಹಂತದಲ್ಲಿ ಕರ್ನಾಟಕದ ನಿಖಿಲ್ ಗೌಡ ಬಳಗ ಮುನ್ನಡೆ ಸಾಧಿಸಿ ದರೆ, ಜಿದ್ದಿಗೆ ಬಿದ್ದಂತೆ ಆಡಿದ ಉತ್ತ ರದ ಹುಡುಗರು ಗೌಡ ಬಳಗವನ್ನು ಹಿಂದೆ ಹಾಕುತ್ತಿದ್ದರು. ಒಂದು ಮತ್ತು ಎರಡು ಪಾಯಿಂಟ್ಗಳ ಅಂತರದ ಸೆಣಸಾಟ ಸೆಟ್ನಲ್ಲಿ ಕಂಡುಬಂತು. ಆದರೆ, 25-25 ಆಗಿದ್ದ ಸಂದರ್ಭ ದಲ್ಲಿ ಕರ್ನಾಟಕದ ಹುಡುಗರು ತೀವ್ರ ಒತ್ತಡದಲ್ಲಿದ್ದದ್ದು ಉತ್ತರಪ್ರದೇಶಕ್ಕೆ ಅನುಕೂಲವಾಯಿತು. ಸತತ ಎರಡು ಪಾಯಿಂಟ್ ಗಳಿಸಿ ಸೆಟ್ನ್ನು ತನ್ನದಾಗಿಸಿಕೊಂಡಿತು.
ಗೋವಿಂದಸ್ವಾಮಿ, ಮೊಹ್ಮದ್ ಅಕೀಬ್ ಬಿ. ಮನೋಜ್ ಮತ್ತು ನಿಖಿಲ್ ಗೌಡ ಆಟ ರಂಗೇರಿತ್ತು. ಆದರೆ, ಉತ್ತರಪ್ರದೇಶ ತಂಡ ನವೀನ್ ಬಲ್ಯಾನ್ ಸ್ಮ್ಯಾಷ್ಗಳ ಸಹಾಯದಿಂದ ಮತ್ತೆರಡು ಪಾಯಿಂಟ್ಗಳ ಮುನ್ನಡೆ ಸಾಧಿಸಿದ ನಂತರ ಆತಿಥೇಯ ಬಳಗದಲ್ಲಿ ಆತ್ಮವಿಶ್ವಾಸ ಕುಂದಿತು. ಇದರ ಉಪಯೋಗ ಪಡೆದ ಎದುರಾಳಿಗಳು ಪಟಪಟನೆ ಅಂಕಗಳನ್ನು ಕಲೆಹಾಕಿ ಸೆಟ್ ಗೆದ್ದುಕೊಂಡರು.
ಕರ್ನಾಟಕಕ್ಕೆ ನಾಲ್ಕನೇ ಸ್ಥಾನ: ತೃತೀಯ ಸ್ಥಾನಕ್ಕಾಗಿ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಪಶ್ಚಿಮ ಬಂಗಾಳವು 25-27, 25-13, 25-18, 25-17ರಿಂದ ಕರ್ನಾಟಕ ತಂಡವನ್ನು ಮಣಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.