ಬೆಂಗಳೂರು: ಬಿಬಿಎಂಪಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಪಗ್ರಹ ಆಧಾರಿತ ಬೋಧನಾ ವಿಧಾನ ಜಾರಿಗೆ ತರಲು ಮುಂದಾಗಿದೆ.ಈ ಮಹತ್ವದ ಯೋಜನೆ ಜಾರಿ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಪಾಲಿಕೆ ಕಚೇರಿಯಲ್ಲಿ ಗುರುವಾರ ಪ್ರಾಯೋಗಿಕ ಸಂವಾದ ಏರ್ಪಡಿಸಲಾಗಿತ್ತು.
ಪಾಲಿಕೆ ಪ್ರೌಢಶಾಲೆಯ ಮಕ್ಕಳು ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಹೆಚ್ಚಾಗಿ ಅನುತ್ತೀರ್ಣರಾಗುತ್ತಿದ್ದಾರೆ.ಶಿಕ್ಷಕರು ಸಾಕಷ್ಟು ಶ್ರಮ ವಹಿಸಿದರೂ ಈ ಮೂರು ವಿಷಯಗಳಲ್ಲಿ ಶೇ 100ರಷ್ಟು ಫಲಿತಾಂಶ ತರಲು ಸಾಧ್ಯವಾಗುತ್ತಿಲ್ಲ.ಆ ಹಿನ್ನೆಲೆಯಲ್ಲಿ ಮಕ್ಕಳಿಗೆ ಉಪಗ್ರಹ ಆಧಾರಿತ ಪಠ್ಯಕ್ರಮ ಬೋಧನಾ ವ್ಯವಸ್ಥೆ ಜಾರಿಗೆ ತರಲು ಪಾಲಿಕೆ ಚಿಂತಿಸಿದೆ.
ಅದರಂತೆ ತಜ್ಞರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಕೆಲವು ವಿಷಯಗಳನ್ನು ಬೋಧಿಸಲಿದ್ದಾರೆ.ಹಾಗೆಯೇ ಅನಿಮೇಷನ್ ಚಿತ್ರ ಸಹಿತ ಮಾಹಿತಿ ನೀಡಲಿದ್ದಾರೆ.ಮಲ್ಲೇಶ್ವರದಲ್ಲಿನ ಪಾಲಿಕೆ ಕಚೇರಿಯಲ್ಲಿ ಉಪಗ್ರಹ ಆಧಾರಿತ ಬೋಧನೆಯ ಪ್ರಾಯೋಗಿಕ ಸಂವಾದವನ್ನು ಗುರುವಾರ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಮತ್ತು ಕ್ರೀಡಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ. ಗಣೇಶ್, ‘ಆಧುನಿಕ ತಂತ್ರಜ್ಞಾನ ಬಳಸಿ ಗುಣಮಟ್ಟದ ಶಿಕ್ಷಣ ನೀಡಲು ಸಾಕಷ್ಟು ಅವಕಾಶಗಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿವೆ.ಆದರೆ ಸರ್ಕಾರಿ- ಬಿಬಿಎಂಪಿ ಶಾಲೆಯ ಮಕ್ಕಳು ಈ ವ್ಯವಸ್ಥೆಯಿಂದ ವಂಚಿತವಾಗಿವೆ’ ಎಂದರು.
‘ಹಾಗಾಗಿ ಪಾಲಿಕೆ ಶಾಲೆಗಳ ಮಕ್ಕಳಿಗೂ ಆಧುನಿಕ ತಂತ್ರಜ್ಞಾನ ಬಳಸಿದ ವಿಧಾನಗಳ ಮೂಲಕ ಶಿಕ್ಷಣ ನೀಡುವ ಉದ್ದೇಶವಿದೆ. ಉಪಗ್ರಹ ಆಧಾರಿತ ಬೋಧನಾ ಕ್ರಮ ಜಾರಿಗೊಳಿಸಲು ಚಿಂತಿಸಲಾಗಿದೆ.ತಜ್ಞರು ವಿವಿಧ ಶಾಲೆಯ ಮಕ್ಕಳಿಗೆ ಏಕಕಾಲಕ್ಕೆ ಪ್ರಾತ್ಯಕ್ಷಿಕೆ ಸಹಿತ ಬೋಧಿಸುವ ವ್ಯವಸ್ಥೆ ಜಾರಿಗೊಳಿಸಬೇಕಿದೆ’ ಎಂದು ಹೇಳಿದರು.
ವಿದ್ಯಾರ್ಥಿಗಳ ಅಭಿಪ್ರಾಯ: ‘ತರಗತಿಯಲ್ಲಿ ಶಿಕ್ಷಕರ ಬಳಿ ಪ್ರಶ್ನೆ ಕೇಳಲು ಭಯವಾಗುತ್ತದೆ.ಹಾಗಾಗಿ ಏನೇ ಗೊಂದಲವಿದ್ದರೂ, ಅರ್ಥವಾಗದಿದ್ದರೂ ಶಿಕ್ಷಕರನ್ನು ಕೇಳುವುದಿಲ್ಲ. ಆದರೆ ಹೊಸ ವ್ಯವಸ್ಥೆಯಡಿ ಪ್ರಶ್ನೆಯನ್ನು ಕೇಳಲು ಯಾವುದೇ ಅಂಜಿಕೆಯಿಲ್ಲ. ಅನಿಮೇಶನ್ ಮೂಲಕ ವಿವರ ನೀಡುವುದು ಉತ್ತಮವಾಗಿದೆ’ ಎಂದು ಬನ್ನಪ್ಪ ಪಾರ್ಕ್ ಪಾಲಿಕೆ ಶಾಲೆಯ 9ನೇ ತರಗತಿ ವಿದ್ಯಾರ್ಥಿ ದೇವರಾಜ್ ಹೇಳುತ್ತಾನೆ.
ಈ ರೀತಿಯ ಬೋಧನೆ ನೆನಪಿನಲ್ಲಿ ಉಳಿಯುತ್ತದೆ. ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳ ಕುರಿತು ಈ ವ್ಯವಸ್ಥೆಯಡಿ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ’ ಎಂದು 9ನೇ ತರಗತಿ ವಿದ್ಯಾರ್ಥಿನಿ ಎಸ್.ಚಂದ್ರಕಲಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.