ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 1 ವರ್ಷದ ಗಂಡು ಕಾಡಾನೆ ಮರಿಯೊಂದು ಸಾವಿಗೀಡಾಗಿದೆ.
ಕೊಡ್ಲಿಪೇಟೆ ಸಮೀಪದ ಕಲ್ಲಳ್ಳಿ ಮಠದ ಜಾಗದಲ್ಲಿ ಮಂಗಳವಾರ 2 ಮರಿಯಾನೆಗಳು ಸೇರಿದಂತೆ ಒಟ್ಟು 10 ಕಾಡಾನೆಗಳು ಬೆಳೆ ನಾಶ ಮಾಡಿ ಜನರಲ್ಲಿ ಭೀತಿ ಮೂಡಿಸಿದ್ದವು. ಅಂದು ರಾತ್ರಿ ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುತ್ತಿದ್ದಾಗ ಕ್ಯಾತೆ ಗ್ರಾಮದ ಜಾವಿದ್ ಹುಸೇನ್ ಎಂಬುವವರಿಗೆ ಸೇರಿದ ಜಾಗದಲ್ಲಿ ಆನೆಯೊಂದರ ದಂತ ಈ ಮರಿಯ ಹೊಟ್ಟೆಯ ಭಾಗಕ್ಕೆ ತಗಲಿ ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿತು ಎಂದು ತಿಳಿದು ಬಂದಿದೆ.ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಮತ್ತು ಸಿಬ್ಬಂದಿ ಮಹಜರು ನಡೆಸಿದರು.
ಸೋಮವಾರಪೇಟೆ ಪಶು ವೈದ್ಯಾಧಿಕಾರಿ ಶಿವರಾಜು ಮರಣೋತ್ತರ ಪರೀಕ್ಷೆ ನಡೆಸಿದರು. ಗುರುವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮರಿಯಾನೆಯ ಮೃತದೇಹಕ್ಕೆ ಪೂಜೆ ಸಲ್ಲಿಸಿ ಬಳಿಕ ದಹಿಸಿದರು.