ಔರಾದ್: ವನಮಾರಪಳ್ಳಿ-ರಾಯಚೂರು ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಮಹಾರಾಷ್ಟ್ರ ಗಡಿಯಿಂದ ಕೌಠಾ (ಬಿ) ವರೆಗಿನ ರಸ್ತೆಯ ವಾಸ್ತವಿಕ ಸ್ಥಿತಿಗತಿಯನ್ನು ಹಿರಿಯ ಅಧಿಕಾರಿಗಳ ತಂಡ ಗುರುವಾರ ಪರಿಶೀಲನೆ ನಡೆಸಿತು.
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಎಂಜಿನಿಯರ್ ಆರ್. ಪ್ರಸಾದ, ಅಧೀಕ್ಷಕ ಎಂಜಿನಿಯರ್ ರಾಜೇಂದ್ರ, ಕಾರ್ಯನಿರ್ವಾಹಕ ಅಭಿಯಂತರ ಗುರುಮೂರ್ತಿ ಸೇರಿದಂತೆ ಎಂಟು ಜನ ಹಿರಿಯ ಅಧಿಕಾರಿಗಳ ತಂಡ ಬೀದರ್-ಔರಾದ್ ನಡುವಿನ ರಸ್ತೆ ಖುದ್ದಾಗಿ ಪರಿಶೀಲಿಸಿದರು.
ಈ ವೇಳೆ ಈ ಅಧಿಕಾರಿಗಳನ್ನು ಭೇಟಿ ಮಾಡಿದ ಇಲ್ಲಿಯ ನಿವಾಸಿ ಪತ್ರಕರ್ತ ಗುರುನಾಥ ವಡ್ಡೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವುದರಿಂದ ಕೂಡಲೇ ರಸ್ತೆ ಕಾಮಗಾರಿ ಶುರು ಮಾಡುವಂತೆ ಕೇಳಿಕೊಂಡರು. ಮೂರು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಮಹಾರಾಷ್ಟ್ರ ಮತ್ತು ಆಂಧ್ರದ ಉಸುಕು ಸೇರಿದಂತೆ ನಿತ್ಯ ನೂರಾರು ಲಾರಿಗಳು ಇಲ್ಲಿ ಒಡಾಡುತ್ತವೆ. ಈ ರಸ್ತೆ ಹದಗೆಟ್ಟ ಕಾರಣ ಕಳೆದ ಐದಾರು ತಿಂಗಳಿನಿಂದ ಇಲ್ಲಿಯ ಪ್ರಯಾಣಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ.
ಸುತ್ತಲೂ 50 ಕಿ.ಮೀ. ಅಂತರದಲ್ಲಿ ಯಾವುದೇ ದೊಡ್ಡ ಆಸ್ಪತ್ರೆ ಇಲ್ಲದ ಕಾರಣ ಹೆರಿಗೆ ಮತ್ತಿತರ ತುರ್ತು ಚಿಕಿತ್ಸೆಗಾಗಿ ಇಲ್ಲಿಯ ಜನ ಬೀದರ್ ಅವಲಂಬಿಸಬೇಕಾಗಿದೆ. ರಾಜ್ಯ ಹೆದ್ದಾರಿ ಮಾದರಿಯಲ್ಲೇ ಈ ರಸ್ತೆ ಅಭಿವೃದ್ಧಿಪಡಿಸುವಂತೆ ವಡ್ಡೆ ಬೇಡಿಕೆ ಮಂಡಿಸಿದರು.
ಈಗಾಗಲೇ ನಮ್ಮ ಅಧಿಕಾರಿಗಳು ಈ ರಸ್ತೆ ನೋಡಿಕೊಂಡು ಹೋಗಿ ವರದಿ ಸಲ್ಲಿಸಿದ್ದಾರೆ. ನಾನು ಕೂಡ ಒಂದು ಸಲ ಈ ರಸ್ತೆ ನೋಡಬೇಕೆಂದು ಇಲ್ಲಿಗೆ ಬಂದಿದ್ದೇನೆ. ಆದಷ್ಟು ಬೇಗ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಎಂಜಿನಿಯರ್ಹೇಳಿದರು.