ಕಠ್ಮಂಡು (ಐಎಎಫ್): ಭಾರತೀಯ ವಾಯುಪಡೆಯ 7 ಜನರ ತಂಡ ಮೌಂಟ್ ಎವರೆಸ್ಟ್ ಮೇಲೆ ಹಾರಿಸಿ ಬಂದ ತ್ರಿವರ್ಣ ಧ್ವಜವನ್ನು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ರಾಕೇಶ್ ಸೂದ್ ಅವರಿಗೆ ಒಪ್ಪಿಸುವುದರೊಂದಿಗೆ ಪರ್ವತಾರೋಹಣವನ್ನು ಯಶಸ್ವಿಯಾಗಿ ಪೂರೈಸಿತು.
6 ವರ್ಷಗಳ ಹಿಂದೆ ವಾಯುಪಡೆಯ ಇತಿಹಾಸದಲ್ಲೇ ಮೊದಲ ಬಾರಿಗೆ 14 ಜನರ ತಂಡ ಎವರೆಸ್ಟ್ ಹತ್ತುವ ಸಾಹಸಕ್ಕೆ ಮುಂದಾಗಿತ್ತು. ಆದರೆ ಕರ್ನಾಟಕದವರಾದ ಸ್ಕ್ವಾಡ್ರನ್ ಲೀಡರ್ ಚೈತನ್ಯ ಅವರು ಕೊರಕಲು ಇಳುಕಲಿನಲ್ಲಿ ಆಮ್ಲಜನಕದ ಕೊರತೆಯಿಂದ ಹಿಮಗಾಳಿಗೆ ಬಲಿಯಾಗಿದ್ದರು. ಆ ತಂಡದಲ್ಲಿ ಮೂವರು ಆಗ ಸಾಧನೆ ಪೂರ್ಣಗೊಳಿಸಿದ್ದರಾದರೂ, ಸಹೋದ್ಯೋಗಿಯ ಸಾವಿನ ಕಹಿನೆನಪಿನಲ್ಲಿ ಅದಕ್ಕೆ ಸೂತಕದ ಛಾಯೆ ಆವರಿಸಿಕೊಂಡಿತ್ತು. ಇದೀಗ ಆರು ವರ್ಷಗಳ ಬಳಿಕ ಇದೇ ತಂಡದ 7 ಜನ ಛಲ ಬಿಡದೆ ತಮ್ಮ ಗುರಿ ಮುಟ್ಟಿದ್ದಾರೆ.
ಕ್ಯಾಪ್ಟನ್ ನರೇಂದ್ರ ಕುಮಾರ್ ದಹಿಯಾ ನೇತೃತ್ವದ ತಂಡದಲ್ಲಿ ಮೂವರು ಮಹಿಳೆಯರಿದ್ದರು. ಇವರಲ್ಲಿ ಮೊದಲು ಗುರಿ ಮುಟ್ಟಿದ ಫ್ಲೈಟ್ ಲೆಫ್ಟಿನೆಂಟ್ ನಿವೇದಿತಾ ಚೌಧರಿ ವಾಯುಪಡೆಯಲ್ಲಿ ಎವರೆಸ್ಟ್ ಏರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜಸ್ತಾನದ ಈ ಯುವತಿ ಶಿಖರ ಹತ್ತುವ ಸಲುವಾಗಿ ತಮ್ಮ ಮದುವೆಯನ್ನೂ ಮುಂದೂಡಿದ್ದರು.