ಹಾಸನ: ‘ನಗರ ಪಾಲಿಕೆಯವರು ಹಾಸನದ ಕೆಲವು ಪ್ರದೇಶದಲ್ಲಿ ರಸ್ತೆ ಡಾಂಬರೀಕರಣದ ಕೆಲಸ ಆರಂಭಿಸಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವೆಡೆ ನಗರಸಭೆ ಯವರು ಹಾಕಿದ್ದ ಡಾಂಬರ್ ಕೆಲವೇ ಗಂಟೆಗಳಲ್ಲಿ ಕಿತ್ತು ಬಂದಿದೆ. ನಗರದ 6ನೇ ವಾರ್ಡ್ನ ಎಸ್ಜೆಪಿ ರಸ್ತೆಯಲ್ಲಿ ಬುಧವಾರ ಡಾಂಬರು ಹಾಕಲಾಗಿದ್ದು ಆ ರಸ್ತೆಯಲ್ಲಿ ಜನರು ನಡೆದಾಡುತ್ತಿದ್ದಾಗಲೇ ಅದು ಕಿತ್ತು ಬಂದಿರುವ ಅಂಶ ಬೆಳಕಿಗೆ ಬಂದಿತು.
ಈ ಬಗ್ಗೆ ಮಾಧ್ಯಮದವರಿಗೆ ವಿಷಯ ತಿಳಿಸಿದ ಸ್ಥಳೀಯರು ಬೂಟುಗಾಲಿನಿಂದ ಸರಿಯಾಗಿ ಒದ್ದಾಗ ಡಾಂಬರು ಕಿತ್ತುಬರುವುದನ್ನು ತೋರಿಸಿದರು. ಕಾಮಗಾರಿಗೆ ಹಾಕಲಾದ ಬಹುತೇಕ ಟಾರು ಕಿತ್ತು ಬಂದಿರುವುದು ಕಾಣಿಸಿತು. ಗುರುವಾರ ಸಂಜೆ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಲ್ಲಿನಿಂದ ತಿಕ್ಕಿದಾಗ ಡಾಂಬರು ಹೊರಬರುತ್ತಿರುವುದನ್ನು ಅವರೂ ಸ್ವತಃ ಪರೀಕ್ಷಿಸಿ ನೋಡಿದರು. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.