ಹೊಸಪೇಟೆ:‘ನೀರು ಮನುಷ್ಯನಿಗೆ ಬೇಕಾದ ಅತಿ ಅವಶ್ಯಕ ವಸ್ತು. ಅಶುದ್ಧ ನೀರಿನಿಂದ ಆರೋಗ್ಯ ಹಾಳಾಗುವು ದಲ್ಲದೆ, ಶುದ್ಧ ಕುಡಿಯುವ ನೀರು ಇಂದಿನ ಪ್ರಮುಖ ಅಗತ್ಯತೆಗಳಲ್ಲಿ ಒಂದು’ ಎಂದು ಎಂಎಸ್ಪಿಎಲ್ನ ವ್ಯವಸ್ಥಾಪಕ ನಿರ್ದೇಶಕ ನರೇಂದ್ರ ಕುಮಾರ್ ಬಲ್ಡೋಟಾ ಅಭಿಪ್ರಾಯಪಟ್ಟರು.
ನಗರಸಭೆ ಮತ್ತು ಚಿತ್ತವಾಡಗಿ ಈಶ್ವರ ದೇವಸ್ಥಾನ ಸಮಿತಿ ಸಹಕಾರದೊಂದಿಗೆ ನಗರದ ೧ನೇ ವಾರ್ಡ್ನಲ್ಲಿ ಸಂಸ್ಥೆಯ ವತಿಯಿಂದ ನಿರ್ಮಿಸಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಸಾನಿಧ್ಯ ವಹಿಸಿದ್ದ ನಂದೀಪುರ ಕ್ಷೇತ್ರದ ಮಹೇಶ್ವರಸ್ವಾಮಿ ಮಾತನಾಡಿ, ‘ಕುಡಿಯುವ ನೀರು ಶುದ್ಧವಾಗಿದ್ದರೆ ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ. ಸಂಸ್ಥೆ ಅನೇಕ ಗ್ರಾಮಗಳನ್ನು ದತ್ತು ತೆಗೆದುಕೊಂಡು, ಅವುಗಳ ಏಳ್ಗೆಗೆ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದರು.
ಇದೇ ಸಂದರ್ಭದಲ್ಲಿ ಕೆ.ಮರಿಸ್ವಾಮಿ ಮತ್ತು ಎಚ್.ಎಂ. ಲಲಿತಾ ಕುಡಿಯುವ ನೀರಿನ ಕ್ಯಾನ್ಗಳನ್ನು ಪಡೆದರು. ಸ್ಥಳೀಯ ಮುಖಂಡರಾದ ಡೊಮ್ಮಿ ದೊಡ್ಡ ಜಂಬಣ್ಣ, ಸಂಗಯ್ಯಸ್ವಾಮಿ, ಕೆ.ನಾಗಪ್ಪ, ಸಿ.ಗುರುನಾಥಶೆಟ್ಟರು, ಚಿತ್ತವಾಡಗಿ ೧೨ನೇ ವಾರ್ಡಿನ ನಗರಸಭೆ ಸದಸ್ಯ ಬೆಲ್ಲದ ರೌಫ್ಸಾಬ್, ಎಂಎಸ್ಪಿಎಲ್ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಈಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
ನಗರಸಭೆ ಸದಸ್ಯ ಪಿ.ಮಲ್ಲಿಕಾರ್ಜುನ, ಸಮಿತಿಯ ಅಧ್ಯಕ್ಷ ಎಸ್.ಎಂ.ರವಿಕಾಂತ ಮತ್ತು ವಿಜಯನಗರ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಲಕ್ಷ್ಮಣ ಮಾತನಾಡಿದರು. ಆರಂಭದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಎ.ಸುಜಾತ ಕರುಣಾನಿಧಿ, ಭಾರತಿ ರವಿಕುಮಾರ್ ಮತ್ತು ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ಎಸ್.ಎಸ್. ಚಂದ್ರಶೇಖರ್ ನಿರೂಪಿಸಿ ದರು. ಜಂಬುನಾಥ ಎಚ್.ಎಂ. ವಂದಿಸಿದರು.