ಲಖನೌ(ಐಎಎನ್ಎಸ್): ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯಲ್ಲಿ ಎರಡು ಕೋಮುಗಳ ಮಧ್ಯೆ ನಡೆದ ಗುಂಪು ಘರ್ಷಣೆಯಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿದ್ದು, ಭದ್ರತೆಗಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ನಡೆದ ಘರ್ಷಣೆಯಲ್ಲಿ ಖಾಸಗಿ ಟಿ.ವಿ ವಾಹಿನಿಯ ವರದಿಗಾರ ಮತ್ತು ಛಾಯಾಗ್ರಾಹಕ ಸೇರಿದಂತೆ 14 ಮಂದಿ ಮೃತಪಟ್ಟಿದ್ದು, 34 ಜನ ಗಾಯಗೊಂಡಿದ್ದಾರೆ.
ಭದ್ರತೆಗಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ.
ಘಟನಾ ಸ್ಥಳ ರಾಜ್ಯ ರಾಜಧಾನಿಯಿಂದ 500 ಕಿ.ಮೀ. ದೂರದಲ್ಲಿದ್ದು, ಹಿಂಸಾಚಾರ ನಡೆದ ಸ್ಥಳದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ, ಪ್ರಾಂತೀಯ ಭದ್ರತಾ ಸಿಬ್ಬಂದಿ ಸೇರಿದಂತೆ ಸೇನಾ ಪಡೆಯ 28 ತುಕಡಿಗಳು ಬೀಡುಬಿಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.