ಪಣಜಿ: ಕ್ರೈಸ್ತ ಪಾದ್ರಿಯೊಬ್ಬರು ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದು ಗೋವಾ ಕ್ಯಾಥೋಲಿಕ್ ಚರ್ಚ್ಗಳ ಮುಖ್ಯಸ್ಥರಿಗೆ ಭಾರಿ ಮುಜುಗರವನ್ನು ಉಂಟು ಮಾಡಿದೆ.
ಫಾದರ್ ಬಿಸ್ಮಾರ್ಕ್ ಡಯಾಸ್ (47) ಅವರು ಕುಂಬರಜುವಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದು, ಸಾಮಾಜಿಕ-ರಾಜಕೀಯ ಸಂಘಟನೆಯಾದ ಜಾಗೃತ ಗೋವಾಂಕರೋಂಚೊ ಎಕ್ವೊಟ್, ಪಾದ್ರಿ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ.
ಪಾದ್ರಿಯವರ ನಿರ್ಧಾರವು ಗೋವಾ ಚರ್ಚ್ಗಳ ಮುಖಸ್ಥರಿಗೆ ಮುಜುಗರ ಉಂಟು ಮಾಡಿದೆ. ಚರ್ಚ್ಗಳ ನಿಯಮಗಳ ಪ್ರಕಾರ ಪಾದ್ರಿಯಾದವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಆದ್ದರಿಂದ ತಾವು ಚರ್ಚ್ ಮುಖ್ಯಸ್ಥರಿಂದ ಅಧಿಕೃತ ಪ್ರತಿಕ್ರಿಯೆಯನ್ನು ಕಾಯುತ್ತಿರುವುದಾಗಿ ಡಯಾಸ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಹಿರಿಯ ಪಾದ್ರಿಯೊಬ್ಬರ ಪ್ರಕಾರ ಚುನಾವಣೆಗೆ ಸ್ಪರ್ಧಿಸ ಬಯಸಿರುವ ಡಯಾಸ್ ಅವರನ್ನು ತಡೆಯಲು ಚರ್ಚ್ಗಳು ಪ್ರಯತ್ನಿಸಿದರೂ ಪ್ರಯೋಜನವಾಗಲಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನ ಪದವೀಧರರಾಗಿರುವ ಡಯಾಸ್ ಅವರು 1996ರಲ್ಲಿ ಪಾದ್ರಿಯಾಗಿ ನೇಮಕಗೊಂಡು ಗೋವಾದಲ್ಲೇ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಚರ್ಚ್ಗೆ ಸೇರಿದ ದ್ವೀಪವೊಂದನ್ನು ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ ಮಾಡಿದ ಕ್ರಮವನ್ನು ಡಯಾಸ್ ಟೀಕಿಸಿದ ನಂತರ ಚರ್ಚ್ನಲ್ಲಿ ಪ್ರಾರ್ಥನೆ ನಡೆಸುವ ಮತ್ತು ಚರ್ಚ್ಗೆ ಬರುವವರನ್ನು ಉದ್ದೇಶಿಸಿ ಧಾರ್ಮಿಕ ಉಪದೇಶ ಮಾಡುವ ಕೆಲಸ ಮಾಡದಂತೆ ನಿರ್ಬಂಧಿಸಲಾಗಿತ್ತು. `ಚರ್ಚ್ನಲ್ಲಿ ಸಲ್ಲಿಸುವ ಸೇವೆಗೂ ಸಾರ್ವಜನಿಕರಿಗೆ ಸಲ್ಲಿಸುವ ಸೇವೆಗೂ ವ್ಯತ್ಯಾಸವೇನಿಲ್ಲ. ಗಣಿಗಾರಿಕೆ ಮತ್ತು ಪ್ರಾದೇಶಿಕ ಅಭಿವೃದ್ಧಿ ಯೋಜನೆಯಿಂದ ಗೋವಾದ ಪ್ರಕೃತಿ ಹಾಳಾಗುತ್ತಿದೆ. ಆದ್ದರಿಂದ ಗೋವಾವನ್ನು ಉಳಿಸಲು ಸ್ವಚ್ಛ ರಾಜಕೀಯ ಸಂಸ್ಕೃತಿಯನ್ನು ಬೆಳಸಬೇಕಿದೆ~ ಎಂದು ಡಯಾಸ್ ತಿಳಿಸಿದ್ದಾರೆ.
ಜಾಗೃತ ಗೋವಾಂಕರೋಂಚೊ ಎಕ್ವೊಟ್ ಈಗಾಗಲೇ ನಾಲ್ವರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೂ ಕೆಲವು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪ್ರಯತ್ನಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.