ಚಿತ್ರದುರ್ಗ: ಅಶುಭ, ಅಮಂಗಲ, ಅಂಜಿಕೆ ನಿವಾರಿಸುವ ನಿಟ್ಟಿನಲ್ಲಿ ಜುಲೈ 16ರಂದು ಚಾಮರಾಜನಗರದಲ್ಲಿ ಆಯೋಜಿಸಿರುವ `ಜನಜಾಗೃತಿ ಸಮಾವೇಶ~ಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.
ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಎಲ್ಲ ಸಮುದಾಯಗಳ ಮಠಾಧೀಶರು, ರಾಜಕಾರಣಿಗಳನ್ನು ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರಗತಿಪರ ಆಲೋಚನೆವುಳ್ಳರಾಗಿದ್ದು, ಅವರನ್ನೂ ಕರೆಯಲಾಗಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾವೇಶದಲ್ಲಿ ಚಾಮರಾಜನಗರದಲ್ಲಿನ ಸಮಸ್ಯೆ ಬಗ್ಗೆಯೂ ಚರ್ಚಿಸಲಾಗುವುದು. ಚಾಮರಾಜನಗರದ ಬಗ್ಗೆ ಇರುವ ಮೂಢನಂಬಿಕೆಯಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಅಲ್ಲಿ ಹೊಸದಾಗಿ ನಿರ್ಮಿಸಿರುವ ಹಲವು ಸರ್ಕಾರಿ ಕಟ್ಟಡಗಳು ಉದ್ಘಾಟನೆಯೇ ಆಗಿಲ್ಲ. ಆದ್ದರಿಂದ ಮಾನಸಿಕ ಸ್ಥೈರ್ಯ, ಧೈರ್ಯ ತುಂಬುವ ನಿಟ್ಟಿನಲ್ಲಿ ಸಾಹಿತಿಗಳು, ಮಠಾಧೀಶರು, ಪ್ರಗತಿಪರರನ್ನು ಆಹ್ವಾನಿಸಲಾಗಿದೆ ಎಂದರು.