ಬೆಂಗಳೂರು: ‘ಬೆಂಗಳೂರಿನಲ್ಲಿ ನಡೆದ 1987 ರ ವಿಶ್ವ ಕಪ್ ಕ್ರಿಕೆಟ್ ಪಂದ್ಯಕ್ಕೆ ಟಿಕೆಟ್ ಖರೀದಿಸಲು ನಾನು ಕೂಡ ಕ್ಯೂನಲ್ಲಿ ನಿಂತು, ಟಿಕೆಟ್ ಸಿಗದೇ ನಿರಾಶನಾಗಿದ್ದೆ. ಈಗ ಭಾರತ-ಇಂಗ್ಲೆಂಡ್ ಪಂದ್ಯದ ಏಳು ಸಾವಿರ ಟಿಕೆಟ್ಗಳಿಗಾಗಿ 70 ಸಾವಿರ ಮಂದಿ ಕ್ಯೂ ನಿಂತರೆ ಹೇಗೆ ಟಿಕೆಟ್ ಸಿಗುತ್ತದೆ? ಆದರೆ ಟಿಕೆಟ್ ಸಿಗದವರ ಕ್ಷಮೆಯನ್ನು ನಾನು ಕೋರುತ್ತೇನೆ” ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದರು.
ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಿಇಒ ಹರೂನ್ ಲಾರ್ಗಟ್ ಅವರ ಪತ್ರಿಕಾಗೋಷ್ಠಿಗೆ ಬಂದ ಶ್ರೀನಾಥ್, ‘ರೈಲು, ಬಸ್ಗಳಿಗೆ ಟಿಕೆಟ್ಗಳನ್ನು ಇಂಟರ್ನೆಟ್ನಲ್ಲಿ ಪಡೆಯಬಹುದು.
ಹಾಗೆಯೇ ಕ್ರಿಕೆಟ್ನಲ್ಲಿ ಕೂಡ ಇಂಟರ್ನೆಟ್ ಸೌಲಭ್ಯ ಇದೆ.ಗೊತ್ತಿಲ್ಲದವರೂ ಬೇರೆಯವರಿಂದ ತಿಳಿದು ಟಿಕೆಟ್ ಪಡೆಯಬಹುದು. ಕ್ಯೂನಲ್ಲಿ ನೂಕುನುಗ್ಗಾಟ ಮಾಡಿದರೆ ಯಾರಿಗೂ ಪ್ರಯೋಜನವಾಗುವುದಿಲ್ಲ. ನಿಜವಾದ ಕ್ರಿಕೆಟ್ಪ್ರೇಮಿಗೆ ಟಿಕೆಟ್ ಸಿಗಬೇಕೆಂಬುದು ನಮ್ಮ ಸಂಸ್ಥೆಯೂ ಬಯಸುತ್ತದೆ. ಕಾಳಸಂತೆಯಲ್ಲಿ ಟಿಕೆಟ್ ಮಾರಾಟವಾಗುವುದು ನನಗೆ ಗೊತ್ತಿಲ್ಲ. ಟಿಕೆಟ್ ಮಾರಾಟ ವಿಷಯದಲ್ಲಿ ನಾವು ಪ್ರಾಮಾಣಿಕವಾಗಿಯೇ ಇದ್ದೇವೆ.
ಕೋಲ್ಕತ್ತದಲ್ಲಿ ಉಳಿದಿರುವ ಕೆಲವು ಟಿಕೆಟ್ಗಳು ಇಂದು (ಶನಿವಾರ) ರಾತ್ರಿ ನಮ್ಮ ಕೈ ಸೇರುವ ನಿರೀಕ್ಷೆ ಇದ್ದು, ಟಿಕೆಟ್ ಕೋರಿಕೆ ಸಲ್ಲಿಸಿರುವವರಿಗೆ ಆದ್ಯತೆ ಮೇಲೆ ಕೊಡಲಾಗುವುದು” ಎಂದು ಅವರು ಉತ್ತರಿಸಿದರು.