ಕೃಷ್ಣರಾಜಪುರ: `ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಸಮಸ್ಯೆಗೆ ಸ್ಪಂದಿಸಲು ವೈದ್ಯರು ಜನಸ್ನೇಹಿ ಗಳಾಗಬೇಕು' ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಕಿವಿಮಾತು ಹೇಳಿದರು.
ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, `ನಿಜವಾದ ಅರ್ಹರು, ಬಡವರು, ನಿರ್ಗತಿಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಸೇರಿದಂತೆ ಇಲ್ಲ ರೀತಿಯ ನೆರವುಗಳನ್ನು ವೈದ್ಯರು ನೀಡಬೇಕು' ಎಂದು ಅವರು ಸೂಚಿಸಿದರು.
ಶಾಸಕ ಬೈರತಿ ಎ.ಬಸವರಾಜು, `ಎರಡೂ ಕ್ಷೇತ್ರಗಳ ವ್ಯಾಪ್ತಿಗೆ ಆಸ್ಪತ್ರೆ ಸೇರಿದೆ. ಹಾಗಾಗಿ 150 ಹಾಸಿಗೆಗೆ ವಿಸ್ತರಿಸಬೇಕು. ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕಗಳನ್ನು ನಿರ್ಮಿಸ ಬೇಕು' ಎಂದು ಆಗ್ರಹಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ರಜನಿ, ಆಡಳಿತ ವೈದ್ಯಾಧಿಕಾರಿ ಶಿವಪ್ರಕಾಶ್, ತಾಲ್ಲೂಕು ವೈದ್ಯಾಧಿಕಾರಿ ಚಂದ್ರಶೇಖರ್ ಮತ್ತಿತರರು ಇದ್ದರು.