ಚಾಮರಾಜನಗರ: ದೇಶದಲ್ಲಿ 1998ರ ವೇಳೆ ರಾಜಕೀಯ ಕ್ಷೇತ್ರ ಕವಲು ದಾರಿಯಲ್ಲಿ ಸಾಗಿತ್ತು. ಹೀಗಾಗಿ, 1998ರಲ್ಲಿ ಲೋಕಸಭಾ ಚುನಾವಣೆ ನಡೆದರೂ ಕೇಂದ್ರದಲ್ಲಿ ತಲೆದೋರಿದ ಅಸ್ಥಿರತೆ ಪರಿಣಾಮ ಮತ್ತೆ 1999ರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲೂ ಈ ಚುನಾವಣೆ ವೇಳೆಗೆ ರಾಜಕಾರಣದಲ್ಲಿ ಹಲವು ಬದಲಾವಣೆ ಕಾಣಿಸಿಕೊಂಡಿದ್ದವು. ವಲಸೆ ಪರ್ವ ಆರಂಭಗೊಂಡಿತ್ತು. ಹಿಂದಿನ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಎ. ಸಿದ್ದರಾಜು ಕಾಂಗ್ರೆಸ್ ಪಾಳಯಕ್ಕೆ ಜಿಗಿದಿದ್ದರು.
ಈಗಿನ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಜೆಡಿಯುಗೆ ಸೇರ್ಪಡೆಗೊಂಡು ಚುನಾವಣೆ ಎದುರಿಸಲು ಸಜ್ಜಾದರು.
1999ರ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯ ಮತದಾರರ ಸಂಖ್ಯೆ 11,01,851ಕ್ಕೆ ಮುಟ್ಟಿತ್ತು. ಇವರಲ್ಲಿ 8,11,900 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದ ಪರಿಣಾಮ ಶೇ 73.68ರಷ್ಟು ಮತದಾನವಾಗಿತ್ತು.
ಜೆಡಿಯುನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಶ್ರೀನಿವಾಸಪ್ರಸಾದ್ 3,11,547 ಮತ ಪಡೆದು ಜಯಗಳಿಸಿದರು. ಇದು ಈ ಕ್ಷೇತ್ರದಲ್ಲಿ ಅವರಿಗೆ ಐದನೇ ಗೆಲುವು ಎನ್ನುವುದು ವಿಶೇಷ. ಜತೆಗೆ, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಆಹಾರ ನಾಗರಿಕ ಪೂರೈಕೆ ಸಚಿವರಾಗಿಯೂ ಸೇವೆ ಸಲ್ಲಿಸಿದರು.
ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ
ಎ. ಸಿದ್ದರಾಜು 2,95,401 ಮತ ಪಡೆದು ಸೋಲು ಅನುಭವಿಸಿದರು. ಜೆಡಿಎಸ್ನಿಂದ ಕಣಕ್ಕೆ ಇಳಿದಿದ್ದ
ಎಚ್. ಗೋವಿಂದಯ್ಯ 1,07,556 ಮತ ಪಡೆದರು. ಎಂ.ಕೆ. ಕೆಂಪಸಿದ್ದಯ್ಯ (ಕೆಸಿವಿಪಿ)– 44,854 ಹಾಗೂ ವಿಚಾರವಾದಿ ಮಂಟೇಲಿಂಗಯ್ಯ(ಪಕ್ಷೇತರ)– 8,187 ಮತ ಪಡೆದರು.