ಚಿಕ್ಕಬಳ್ಳಾಪುರ: ನಗರದ ಬಸಪ್ಪ ಛತ್ರದಲ್ಲಿ ವಾಸಿಸುತ್ತಿದ್ದ ನಿರಾಶ್ರಿತರನ್ನು ಒಕ್ಕಲೆಬ್ಬಿಸಿದ ಅಧಿಕಾರಿಗಳು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ, ತೀವ್ರ ಚಳಿಯಿಂದ ಮಗುವೊಂದು ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ.
ಆರೀಫುಲ್ಲಾ ಅವರ ಮೂರು ತಿಂಗಳ ಮಗು ಜಬೀವುಲ್ಲಾ ಮೃತ ಶಿಶು. ನಗರಸಭೆ ಮತ್ತು ಜಿಲ್ಲಾಡಳಿತ ಕೊಟ್ಟ ಮಾತು ಉಳಿಸಿಕೊಂಡಿದ್ದರೆ ನಮ್ಮ ಮಗು ಸಾಯುತ್ತಿರಲಿಲ್ಲ ಎಂದು ಆರೀಫುಲ್ಲಾ ಕಣ್ಣೊರೆಸಿಕೊಂಡರು.
ನಿರಾಶ್ರಿತರನ್ನು ಒಕ್ಕಲೆಬ್ಬಿಸಿದ್ದ ನಗರಸಭೆ ಮತ್ತು ಜಿಲ್ಲಾಡಳಿತ ಕಂದವಾರದ ಬಳಿ ಟೆಂಟ್ಗಳನ್ನು ಕೊಟ್ಟು, ಶೀಘ್ರ ಮನೆಗಳನ್ನು ವಿತರಿಸುವ ಭರವಸೆ ನೀಡಿತ್ತು. ಶಾಸಕರೂ ಹಲವು ಬಾರಿ ಭರವಸೆಗಳನ್ನು ನೀಡಿದ್ದರು. ಆದರೆ ನಂತರ ಇತ್ತ ತಿರುಗಿಯೂ ನೋಡಲಿಲ್ಲ ಎಂದು ದೂರಿದರು.
ಮಗುವನ್ನು ಕಳೆದುಕೊಳ್ಳಲು ಚಳಿಯೇ ಕಾರಣ, ಪಕ್ಕಾ ಮನೆ ಇದ್ದಿದ್ದರೆ ಮಗು ಸಾಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.