ಬಂಟ್ವಾಳ: ತಾಲ್ಲೂಕಿನ ತುಂಬೆ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಮದ್ಯದಂಗಡಿ ಬಳಿ ಪೊಲೀಸ್ ಬಲೆಗೆ ಬಿದ್ದಿದ್ದ ವಾರೆಂಟ್ ಆರೋಪಿಯೊಬ್ಬ ಪೊಲೀಸ್ ಸಿಬ್ಬಂದಿಗೆ ಏಮಾರಿಸಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಆರೋಪಿಯನ್ನು ಇಲ್ಲಿನ ಮಾರಿಪಳ್ಳ ಸಮೀಪದ ರೊಟ್ಟಿಗುಡ್ಡೆ ನಿವಾಸಿ ಸಿರಾಜ್ ಯಾನೆ ಬಾಳೆಕಾಯಿ ಸಿರಾಜ್ ಎಂದು ಗುರುತಿಸಲಾಗಿದ್ದು, ಈತನು ಹಲ್ಲೆ, ಕಳವು ಮತ್ತಿತರ ಮೂರಕ್ಕೂ ಮಿಕ್ಕಿ ಕ್ರಿಮಿನಲ್ ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.
ನಾಲ್ಕು ವರ್ಷಗಳಿಂದ ಕಾಸರಗೋಡು ಮತ್ತು ಉಪ್ಪಳ ಪರಿಸರದಲ್ಲಿ ತಲೆಮರೆಸಿಕೊಂಡಿದ್ದ ಈತನು ಕೆಲವೊಮ್ಮೆ ತುಂಬೆ ಮದ್ಯದಂಗಡಿಗೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಇದರಿಂದಾಗಿ ಬುಧವಾರ ರಾತ್ರಿ
ಕಾರಿನಲ್ಲಿ ಬಂದಿದ್ದ ಪೊಲೀಸರು ಈತನಿಗೆ ಹೊಂಚು ಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಇದೇ ವೇಳೆ ಮತ್ತೊಬ್ಬ ವಾರಂಟ್ ಆರೋಪಿ ಸುಂದರ ಎಂಬಾತ ಕೂಡಾ ಇಲ್ಲೇ ಇದ್ದಾನೆ ಎಂದು ಸಿರಾಜ್ ಪೊಲೀಸರನ್ನು ನಂಬಿಸಿದ್ದನು. ಈ ಸಂದರ್ಭದಲ್ಲಿ ಈತನ ಜತೆಗೆ ಕಾರಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಲಕ್ಷ್ಮಣ ಎಂಬವರ ಕಣ್ಣು ಮತ್ತು ಮುಖಕ್ಕೆ ಗಂಭೀರ ಹಲ್ಲೆ ನಡೆಸಿ ಕತ್ತಲೆಯಲ್ಲೇ ಪರಾರಿಯಾದ.
ಸಿರಾಜ್ ಜೊತೆಗೆ ತಳ್ಳಾಟ ನಡೆಸಿ, ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಲಕ್ಷ್ಮಣ ಹಲ್ಲು ಉದುರಿ ಹೋಗಿದೆ. ರೂ.60ಸಾವಿರ ಮೌಲ್ಯದ ಚಿನ್ನ ಸರ ನಾಪತ್ತೆಯಾಗಿದೆ ಎಂದು ಗ್ರಾಮಾಂತರ ಠಾಣಾಧಿಕಾರಿ ಮಹಮ್ಮದ್ ರಫೀಕ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಅಮ್ಮುಂಜೆ: ಮಹಿಳೆ ಮನೆಗೆ ಬೆಂಕಿ- ದೂರು
ಬಂಟ್ವಾಳ: ಅಮ್ಮುಂಜೆ ಗ್ರಾಮದ ಶಿವಾಜಿನಗರ ಎಂಬಲ್ಲಿ ಮಹಿಳೆಯೊಬ್ಬರ ಮನೆಗೆ ಬೆಂಕಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ. ಇಲ್ಲಿನ ಅಮ್ಮುಂಜೆ ಸಮೀಪದ ಶಿವಾಜಿನಗರ ನಿವಾಸಿ ರುಕಿಯಾ ಎಂಬವರ ಮನೆಗೆ ತುಂಬೆ ನಿವಾಸಿ ಆಶ್ರಫ್ ಎಂಬಾತ ಬುಧವಾರ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿದ್ದ ಎನ್ನಲಾಗಿದೆ.
ಆರಂಭದಲ್ಲಿ ರುಕಿಯಾಳ ಪುತ್ರಿಯನ್ನು ವಿವಾಹವಾಗಲು ಆಶ್ರಫ್ ಬಯಸಿದ್ದು, ಇದನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ರುಕಿಯಾಗೆ ದೂರವಾಣಿ ಮೂಲಕ ಬೆದರಿಕೆ ಕರೆ ಒಡ್ಡಿದ್ದ ಎನ್ನಲಾಗಿದೆ. ಬುಧವಾರ ತಡರಾತ್ರಿ ಸುಮಾರು ಎರಡು ಗಂಟೆ ವೇಳೆಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ರುಕಿಯಾ ಬೊಬ್ಬೆ ಹಾಕಿದ್ದಾರೆ.
ಇದೇ ವೇಳೆ ಸ್ಥಳೀಯರು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಮನೆ ಸುತ್ತಲೂ ಮಡ್ ಆಯಿಲ್ ಚೆಲ್ಲಿರುವುದು ಪತ್ತೆಯಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ರುಕಿಯಾ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.