ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ಸುಧಾರಣೆ: ಇಂದು ಮರಳಿ ಜೈಲಿಗೆ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲೆತ್ನಿಸಿದ ಆರೋಪದ ಮೇಲೆ ಬಂಧಿತರಾಗಿ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ತೂಗುದೀಪ ಅವರ ದೇಹ ಸ್ಥಿತಿ ಸುಧಾರಿಸಿದ್ದು, ವೈದ್ಯರು ಅವರನ್ನು ಸೋಮವಾರ ಆಸ್ಪತ್ರೆಯಿಂದ ಕಾರಾಗೃಹಕ್ಕೆ ಕಳುಹಿಸಲಿದ್ದಾರೆ.

`ಅಸ್ತಮಾ, ಕಾಮಾಲೆ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ದರ್ಶನ್ ಅವರು ಚೇತರಿಸಿಕೊಂಡಿದ್ದಾರೆ. ಅಸ್ತಮಾ ಮತ್ತು ರಕ್ತದೊತ್ತಡ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗುತ್ತದೆ~ ಎಂದು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ್ ಬುಗ್ಗಿ `ಪ್ರಜಾವಾಣಿ~ಗೆ ತಿಳಿಸಿದರು.

`ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವ ದರ್ಶನ್ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದೆ. ದಿನನಿತ್ಯದಂತೆ ಅವರು ಭಾನುವಾರ ಆಹಾರ ಸೇವಿಸಿದರು. ಬೆಳಗಿನ ತಿಂಡಿಗೆ ಇಡ್ಲಿ ನೀಡಲಾಗಿತ್ತು. ಅವರು ವೈದ್ಯರೊಂದಿಗೆ ಲವಲವಿಕೆಯಿಂದ ಮಾತನಾಡಿದರು~ ಎಂದು ಶಶಿಧರ್ ಹೇಳಿದರು.

`ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ನಂತರವೂ ದರ್ಶನ್ ನಿರಂತರವಾಗಿ ಔಷಧ ಸೇವಿಸಬೇಕು. ಇಲ್ಲದಿದ್ದರೆ ಅಸ್ತಮಾ ಸಮಸ್ಯೆ ನಿಯಂತ್ರಣಕ್ಕೆ ಬರುವುದಿಲ್ಲ~ ಎಂದು ಅವರು ಮಾಹಿತಿ ನೀಡಿದರು.

ಬೆರಳಿಗೆ ಗಾಯ: ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಎರಡೂ ಕೈಗಳ ತೋರು ಬೆರಳುಗಳಿಗೆ ಗಾಯವಾಗಿದೆ.

`ಅವರ ತೋರು ಬೆರಳುಗಳು ಊದಿಕೊಂಡಿವೆ. ಊತ ಕಡಿಮೆ ಮಾಡಲು ಚುಚ್ಚುಮದ್ದು ನೀಡಲಾಗಿದೆ ಮತ್ತು ಬೆರಳುಗಳಿಗೆ ಬ್ಯಾಂಡೇಜ್ ಹಾಕಲಾಗಿದೆ. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯ ಇಲ್ಲದಿರುವುದರಿಂದ ವಿಜಯಲಕ್ಷ್ಮಿ ಅವರು ಮನೆಗೆ ಮರಳಬಹುದು ಎಂದು ಮೂಳೆ ತಜ್ಞ ಡಾ.ಜಿ.ಮಲ್ಲಿನಾಥ್ ವರದಿ ನೀಡಿದ್ದಾರೆ~ ಎಂದು  ಎಂದು ಆಸ್ಪತ್ರೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.


ಪತ್ನಿ ದರ್ಶನದ ನಂತರ...
ಬೆಂಗಳೂರು: ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಅವರು ನಗರದ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ಭಾನುವಾರ ಸಂಜೆ ಭೇಟಿ ನೀಡಿ ಪತಿಯ ಆರೋಗ್ಯ ವಿಚಾರಿಸಿದರು.

ಕೆಂಗೇರಿ ಬಳಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಒಳ ರೋಗಿ ಯಾಗಿ ದಾಖಲಾಗಿದ್ದ ವಿಜಯಲಕ್ಷ್ಮಿ ಅವರು ಪತಿಯನ್ನು ಭೇಟಿ ಮಾಡಲು ಮುಂದಾದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರನ್ನು ಸಂಜೆ ಐದು ಗಂಟೆ ಸುಮಾರಿಗೆ ಭೇಟಿ ಮಾಡಿದ ವಿಜಯಲಕ್ಷ್ಮಿ ಅವರು ಅರ್ಧ ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಸಾಕಷ್ಟು ರಾದ್ಧಾಂತದ ನಂತರ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾದ ದರ್ಶನ್ ದಂಪತಿ ಪರಸ್ಪರ ತಬ್ಬಿಕೊಂಡು ಭಾವುಕರಾದರು. ಪರಸ್ಪರರು ಪಶ್ಚಾತಾಪದ ಮಾತುಗಳನ್ನಾಡಿ ಕ್ಷಮೆ ಕೋರಿದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
 

ಪತಿಯನ್ನು ಭೇಟಿ ಮಾಡಿ ಆಸ್ಪತ್ರೆಯಿಂದ ಹೊರ ಬಂದ ವಿಜಯಲಕ್ಷ್ಮಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಲು ಮುಂದಾದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಕಾರಿನಲ್ಲಿ ಹೊರಟು ಹೋದರು.
ದರ್ಶನ್ ಅವರ ಸಹೋದರ ನಿರ್ದೇಶಕ ದಿನಕರ್ ಅವರು ಇಡೀ ದಿನ ಆಸ್ಪತ್ರೆಯಲ್ಲೇ ಇದ್ದರು. ನಟರಾದ ರಮೇಶ್‌ಭಟ್, ಶ್ರೀನಿವಾಸ್‌ಮೂರ್ತಿ ಅವರು ದರ್ಶನ್ ಅವರನ್ನು ಭೇಟಿ ಮಾಡಿದರು. 
ಆಸ್ಪತ್ರೆ ಬಳಿ ಅಭಿಮಾನಿಗಳು  ಜಮಾಯಿಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT