ಪುತ್ತೂರು: `ಅಸಹಾಯಕಳಾಗಿ ಬದುಕುತ್ತಿರುವ ಬಡವಳಾದ ತನಗೆ ಸ್ಥಳೀಯರಿಬ್ಬರು ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಿದರೂ ದೂರು ದಾಖಲಿಸಿಕೊಳ್ಳಲಿಲ್ಲ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಂದ ಹಿಡಿದು ಪಶ್ಚಿಮ ವಲಯದ ಪೊಲೀಸ್ ವರಿಷ್ಠಾಧಿಕಾರಿಗಳ ತನಕ ಎಲ್ಲರಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಸಹಾಯಕರಾದ ತಮಗೆ ನ್ಯಾಯ ಮತ್ತು ರಕ್ಷಣೆ ನೀಡುವವರೇ ಇಲ್ಲ' ಎಂದು 70ರ ಹರೆಯದ ವೃದ್ಧೆ ಬೆಳ್ತಂಗಡಿ ತಾಲ್ಲೂಕಿನ ಕರಾಯ ಗ್ರಾಮದ ಗರೋಡಿ ಬಳಿಯ ನಿವಾಸಿ ಶ್ರಿಮತಿ ಆಚಾರ್ತಿ ಅಳಲು ತೋಡಿಕೊಂಡಿದ್ದಾರೆ.
ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಗಾದ ಅನ್ಯಾಯದ ಕುರಿತು ಮಾಧ್ಯಮಗಳ ಮುಂದೆ ದುಃಖ ತೋಡಿಕೊಂಡರು.
`ತಮಗಿರುವ ಕೃಷಿ ಭೂಮಿಯಲ್ಲಿ ಕುಟುಂಬ ಸಮೇತಳಾಗಿ ತಾನು ವಾಸ್ತವ್ಯವಿದ್ದು, ಬೀಡಿ ಸುತ್ತಿ ಜೀವನ ನಡೆಸುತ್ತಿದ್ದೇವೆ. ನೆರೆಯವರಾದ ಡೊಂಬಯ್ಯ ನಾಯ್ಕ ಮತ್ತು ಹರೀಶ್ ನಾಯ್ಕ ಅವರು ನಮ್ಮ ಆಸ್ತಿಯನ್ನು ಅತಿಕ್ರಮಿಸಿ ರಸ್ತೆ ನಿರ್ಮಿಸಲು ಮುಂದಾದ ಕುರಿತು ಕಳೆದ ಮಾರ್ಚ್ 13ರಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.
ಆ ಬಳಿಕ ಆರೋಪಿಗಳು ನಮ್ಮ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶಗೈದು ಜೀವ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡ್ದ್ದಿದರೂ ಕ್ರಮ ಕೈಗೊಂಡಿಲ್ಲ' ಎಂದು ದೂರಿದರು.