ವಿಜಾಪುರ: ಮುಳವಾಡ ಏತ ನೀರಾವರಿಯ ಬಾಕಿ ಕಾಮಗಾರಿಗೆ ಒತ್ತಾಯಿಸಿ ಮುಳವಾಡ ಏತ ನೀರಾವರಿ `ಬಿ~ ಸ್ಕೀಮ್ ರೈತರ ಹಿತರಕ್ಷಣಾ ಸಮಿತಿಯವರು ಮುಳವಾಡದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮುಂದುವರೆದಿದೆ.
ಧರಣಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ತಹಶೀಲ್ದಾರ ಮಹಾದೇವ ಮುರಗಿ, ಹೋರಾಟ ಕೈಬಿಡುವಂತೆ ಮನವಿ ಮಾಡಿದರು.
ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ. ಇನ್ನೆರಡು ದಿನಗಳಲ್ಲಿ ಸ್ಪಷ್ಟ ಉತ್ತರ ಬರದಿದ್ದರೆ ನಿರಂತರ ಹೋರಾಟ ನಡೆಸುವುದಾಗಿ ಧರಣಿ ನಿರತರು ಹೇಳಿದರು.
ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರರು, ಅದನ್ನು ಮೇಲಾಧಿಕಾರಿ ಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಹಿರೇಮಠದ ಸ್ವಾಮೀಜಿ, ಎಚ್.ಎಸ್ ಹೂಗಾರ, ಚನ್ನಪ್ಪಗೌಡ ಎಸ್. ಬಿರಾದಾರ, ಎಸ್.ಎಸ್. ಬೀಳಗಿ, ಬಿ.ಎಸ್. ಕಳಸಗೊಂಡ, ಆರ್.ಎ. ನಾಗರಾಳ, ಎಸ್.ಜಿ. ಚನ್ನಾಳ, ರವಿ ಕೆಂಗನಾಳ, ಎಸ್.ಆರ್. ಪಾಟೀಲ, ವಿ.ಎಂ. ಮಂಟೂರ, ರಮೇಶ ನಾಗರಾಳ, ಎಸ್.ಎ. ಬಿರಾದಾರ ಇತರರು ಉಪಸ್ಥಿತರಿದ್ದರು.