ಮಡಿಕೇರಿ: ದುರುದ್ದೇಶದಿಂದಾಗಿ ಹಾಗೂ ನನ್ನ ರಾಜಕೀಯ ಜೀವನ ಕೊನೆಗಾಣಿಸುವ ಉದ್ದೇಶದಿಂದಲೇ ಅಕ್ರಮ ಮರಳು ದಂಧೆಯಲ್ಲಿ ನನ್ನ ಹಾಗೂ ನನ್ನ ಪತಿಯ ಹೆಸರನ್ನು ಸೇರಿಸಲಾಗಿದೆ ಎಂದು ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾನೂರು ಬಳಿ ಲಕ್ಷ್ಮಣತೀರ್ಥ ನದಿಯ ತಟದಲ್ಲಿ ಪತ್ತೆಯಾಗಿರುವ ಮರಳು ದಂಧೆಯಲ್ಲಿ ಅನಾವಶ್ಯಕವಾಗಿ ನನ್ನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ಈ ಅಕ್ರಮ ಮರಳು ದಂಧೆಯಲ್ಲಿ ನನ್ನ ಪಾತ್ರವಾಗಲಿ, ನನ್ನ ಕುಟುಂಬದ ಪಾತ್ರವಾಗಲಿ ಇಲ್ಲ. ಘಟನಾ ಸ್ಥಳದಲ್ಲಿ ಮರಳು ಎತ್ತುತ್ತಿದ್ದ ಮೂರು ಜನ ಕೂಲಿಕಾರ್ಮಿಕರ ಮಾತಿನ ಆಧಾರದ ಮೇಲೆ ನಮ್ಮ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೆ ಪೂರಕವಾದ ಯಾವ ಸಾಕ್ಷ್ಯಾ ಧಾರಗಳೂ ಅವರ ಬಳಿ ಇಲ್ಲ ಎಂದು ನುಡಿದರು.
ಅಧಿಕಾರಿಗಳು ನನ್ನ ಮನೆಯ ಮೇಲೆ ದಾಳಿ ಮಾಡಿದಾಗ ಎಲ್ಲಿಯೂ ಮರಳು ದೊರೆತಿಲ್ಲ. ಮರಳು ಗಣಿಗಾರಿಕೆಗೆ ಬಳಸುವ ಯಾವುದೇ ಉಪಕರಣಗಳು ದೊರೆತಿಲ್ಲ ಎಂದು ಅವರು ಹೇಳಿದರು.
ಅಧಿಕಾರಿಗಳು ನದಿ ತಟದ ಮೇಲೆ ದಾಳಿ ಮಾಡಿದಾಗ ಅಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದ ಕೂಲಿಕಾರರು ಏಕೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಈ ಕೂಲಿಕಾರರು ಟಿ.ವಿ ಮಾಧ್ಯಮ ದವರ ಮುಂದೆ ಲೀಲಾಜಾಲವಾಗಿ ಮಾತನಾಡುವುದನ್ನು ನೋಡಿದರೆ, ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ತಿಳಿದುಬರುತ್ತದೆ ಎಂದರು.
ಅಲ್ಲಿ ಕೆಲಸ ಮಾಡುವ ಕೂಲಿಕಾರರು ಯಾರೂ ನಮಗೆ ಪರಿಚಯವಿಲ್ಲ. ಆಶ್ಚರ್ಯದ ವಿಷಯವೆಂದರೆ, ಘಟನಾ ಸ್ಥಳದಲ್ಲಿ ಸಿಕ್ಕಿದ್ದ 3 ಜನ ಕೂಲಿಕಾರರನ್ನು ಪೊಲೀಸರು ಇದುವರೆಗೆ ಬಂಧಿಸಿಲ್ಲ. ಇವೆಲ್ಲ ವಿಷಯಗಳ ಸತ್ಯಾಂಶ ಹೊರ ಬರಬೇಕಾದರೆ, ಸಮಗ್ರ ತನಿಖೆ ಯಾಗಲೇ ಬೇಕು ಎಂದು ಒತ್ತಾಯಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಜಿ.ಪ.. ಸಭೆಯಲ್ಲಿ ಅನೇಕ ಅವ್ಯವಹಾರಗಳನ್ನು ಬಯಲಿಗೆ ಎಳೆದಿದ್ದೇನೆ. ಇದರಿಂದ ಕೆರಳಿರುವ ಸ್ಥಳೀಯ ರಾಜಕೀಯ ಮುಖಂಡರು ಉದ್ದೇಶಪೂರ್ವಕ ವಾಗಿಯೇ ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡಿದ್ದಾರೆ ಎಂದರು.
ಈ ಭಾಗದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಇದನ್ನು ತಡೆ ಯುವಂತೆ ನಾವೇ ಖುದ್ದಾಗಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ಥಳೀಯ ಶಾಸಕರುಗಳಿಗೆ ಪತ್ರ ನೀಡಿದ್ದೇವು. ಇಂತಹ ಸ್ಥಿತಿಯಲ್ಲಿ ನಮ್ಮ ವಿರುದ್ಧವೇ ಅಕ್ರಮ ಮರಳು ದಂಧೆ ಆರೋಪ ಹೊರಿಸಲಾಗಿದೆ ಎಂದು ಮನನೊಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.