ಬೆಂಗಳೂರು: ಚೌಡಯ್ಯ ಸ್ಮಾರಕ ಭವನದ ಅಕಾಡೆಮಿ ಆಫ್ ಮ್ಯೂಸಿಕ್ ಇದೇ 23ರಿಂದ ಐದು ದಿನಗಳ ಕಾಲ ಸಂಗೀತ ಮಹೋತ್ಸವ ಹಾಗೂ ಸಂಗೀತ ಸಾಧಕರಿಗೆ ಕೆ.ಕೆ.ಮೂರ್ತಿ ಸ್ಮಾರಕ ಚೌಡಯ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.
ಸಂಗೀತ ವಿದ್ವಾನ್ ಮದುರೆ ಟಿ.ಎನ್.ಶೇಷಗೋಪಾಲನ್ ಹಾಗೂ ರುದ್ರಪಟ್ಣಂ ಸಹೋದರರು ಎಂದೇ ಹೆಸರಾದ ವಿದ್ವಾನ್ ಆರ್.ಎನ್.ತ್ಯಾಗರಾಜನ್ ಮತ್ತು ಡಾ.ಆರ್.ಎನ್.ತಾರಾನಾಥನ್ ಅವರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿ ವಿಜೇತರು ಮಾತ್ರವಲ್ಲದೆ ದೇಶದ ಖ್ಯಾತ ಕಲಾವಿದರಾದ ಡಾ. ನಿತ್ಯಶ್ರೀ ಮಹದೇವನ್, ಡಾ.ಅಶ್ವಿನಿ ಭಿಡೆ ದೇಶಪಾಂಡೆ, ಮೈಸೂರು ನಾಗರಾಜ್, ಮೈಸೂರು ಮಂಜುನಾಥ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಎಳೆಯ ಪ್ರತಿಭೆಗಳನ್ನು ಪರಿಚಯಿಸುವ ಸಂಗೀತ ಕಾರ್ಯಕ್ರಮಗಳು, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಕುರಿತ ಮಂಥನ, ಪ್ರಾತ್ಯಕ್ಷಿಕೆಗಳು ಉತ್ಸವದಲ್ಲಿ ನಡೆಯಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಜಿ.ಕೆ.ವೀರೇಶ್ ತಿಳಿಸಿದ್ದಾರೆ.