`ಕುವೆಂಪು ನಾಡಗೀತೆಗೆ ಒಪ್ಪಿಗೆ ಇಲ್ಲ' ಎಂಬ ಪಾಟೀಲ ಪುಟ್ಟಪ್ಪ ಅವರ ಹೇಳಿಕೆ, `ಪ್ರಜಾವಾಣಿ' ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. `ರಾಷ್ಟ್ರಗೀತೆ ಹಾಡಲು ಕೇವಲ 57 ಸೆಕೆಂಡುಗಳು ಸಾಕು. ನಾಡಗೀತೆಗೆ ಏಳು ನಿಮಿಷ ಬೇಕು. ನಮ್ಮಂತಹ ವಯಸ್ಸಾದವರು ಅಷ್ಟು ಹೊತ್ತು ನಿಲ್ಲಲು ಆಗುವುದಿಲ್ಲ' ಎಂದಿದ್ದಾರೆ. ಪಾಪು ಅವರಂತಹ ಹಿರಿಯರಿಗೆ ನಿಲ್ಲಲು ಕಷ್ಟವಾದರೆ ಕುಳಿತುಕೊಂಡೇ ಹಾಡಿ ನಾಡಗೀತೆಗೆ ಗೌರವ ಸಲ್ಲಿಸಬಹುದು.
ನಾಡಗೀತೆಯಲ್ಲಿ ಸಾಮಂತರಾಜರ ಪ್ರಸ್ತಾಪ ಮಾತ್ರ ಇದೆ. ರಾಷ್ಟ್ರಕೂಟರು, ಚಾಲುಕ್ಯರು, ವಿಜಯನಗರದ ಅರಸರು ಮತ್ತು ಗಾಂಧೀಜಿಯವರ ಹೆಸರೇ ಇಲ್ಲ ಎಂದು ಹೇಳಿದ್ದಾರೆ. ಗೀತೆಯಲ್ಲಿ ಈ ರಾಜವಂಶದವರೇ ಅಲ್ಲದೆ ನಾಡಿಗೋಸ್ಕರ ದುಡಿದು ನಾಡನ್ನು ಕಟ್ಟಲು ಶ್ರಮಿಸಿದವರು ಅನೇಕರಿದ್ದರೂ ಅವರೆಲ್ಲರ ಹೆಸರನ್ನು ಸೇರಿಸಲಾಗಿಲ್ಲ. ಕುವೆಂಪು ಅವರಿಗೆ ನಾಡಗೀತೆಯಲ್ಲಿ ಇವರೆಲ್ಲರ ಹೆಸರನ್ನು ಸೇರಿಸಬಾರದು ಎಂಬ ದುರುದ್ದೇಶವೇನೂ ಇರಲಿಲ್ಲ ಎಂಬುದು ನನ್ನ ಭಾವನೆ. ನಾಡಗೀತೆಯ ಆಂತರ್ಯದಲ್ಲಿ ಎಲ್ಲರನ್ನೂ ಸ್ಮರಿಸಲಾಗಿದೆ ಎಂಬುದು ಜನತೆಗೆ ಗೊತ್ತಿದೆ. ಈ ಗೀತೆ ಪರಿಪೂರ್ಣ ಅಲ್ಲ ಎಂದಿರುವುದು ದುರದೃಷ್ಟಕರ.