ಮುಂಬೈ (ಪಿಟಿಐ): ಮಾರುಕಟ್ಟೆಯ ನಿರೀಕ್ಷೆಗೆ ಅನುಗುಣವಾಗಿಯೇ ಆರ್ಬಿಐ, ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿ, ಹಣದುಬ್ಬರ ಏರಿಕೆ ಮತ್ತು ಚಾಲ್ತಿ ಖಾತೆ ಕೊರತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ಮುಂಬೈ ಷೇರುಪೇಟೆಯ ಬುಧವಾರದ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.
ಸಂವೇದಿ ಸೂಚ್ಯಂಕವು 182 ಅಂಶಗಳನ್ನು ಕಳೆದುಕೊಂಡು 19 ಸಾವಿರ ಅಂಶಗಳಿಗಿಂತ ಕೆಳಗೆ (18,969) ಇಳಿಯಿತು. ಬಡ್ಡಿ ದರಕ್ಕೆ ಸಂಬಂಧಿಸಿದ ಷೇರುಗಳಾದ ಬ್ಯಾಂಕ್, ರಿಯಾಲ್ಟಿ, ಆಟೊಮೊಬೈಲ್ ಸೇರಿದಂತೆ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕು ತಯಾರಿಕಾ ಷೇರುಗಳು ಮಾರಾಟ ಒತ್ತಡಕ್ಕೆ ಗುರಿಯಾಗಿ ನಷ್ಟ ಅನುಭವಿಸಿದವು.
ಚಾಲ್ತಿ ಖಾತೆ ಕೊರತೆ ಮತ್ತು ಬ್ಯಾಂಕ್ ಠೇವಣಿಗಳು ಹಾಗೂ ಸಾಲ ನೀಡಿಕೆ ಹೆಚ್ಚಳದ ಮಧ್ಯೆ ಹೆಚ್ಚಲಿರುವ ಅಂತರದ ಬಗ್ಗೆ ರಿಸರ್ವ್ ಬ್ಯಾಂಕ್ ಗವರ್ನರ್ ಸುಬ್ಬರಾವ್ ವ್ಯಕ್ತಪಡಿಸಿದ ಕಳವಳವು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.