ಗದಗ: ಬಸವ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ಡಿ. 31ರೊಳಗೆ ಮನೆ ನಿರ್ಮಾಣ ಆರಂಭಿಸದಿದ್ದರೆ ಮಂಜೂರಾಗಿರುವ ಮನೆಗಳನ್ನು ರದ್ದುಗೊಳಿಸ ಲಾಗುವುದು.
ಈ ರೀತಿಯ ಆದೇಶವನ್ನು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮವು ಜಿಲ್ಲಾ ಪಂಚಾಯಿತಿಗೆ ರವಾನಿಸಿದೆ. ಬಸವ ವಸತಿ ಯೋಜನೆಯಡಿ 2012ರ ಆಗಸ್ಟ್ವರೆಗೆ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳು ಡಿ. 31ರೊಳಗೆ ಕಡ್ಡಾಯವಾಗಿ ಮನೆಗಳನ್ನು ಪ್ರಾರಂಭಿಸಿ ಮೊದಲ ಕಂತಿನ ಹಣ ಪಡೆಯಬೇಕು. ಇಲ್ಲದಿದ್ದರೆ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗುವುದು.
ಪ್ರಸಕ್ತ ವರ್ಷ ಬಸವ ವಸತಿ ಯೋಜನೆಯಲ್ಲಿ ಜಿಲ್ಲೆಗೆ 24,566 ಮನೆಗಳ ನಿರ್ಮಾಣ ಗುರಿ ನೀಡಲಾಗಿತ್ತು. ಗದಗ ತಾಲ್ಲೂಕು-2925, ಮುಂಡರಗಿ-3355, ನರಗುಂದ-2538, ರೋಣ-4231, ಶಿರಹಟ್ಟಿಗೆ -6570 ಮನೆಗಳು ಮಂಜೂರಾಗಿವೆ.
ಈಗಾಗಲೇ 15,878 ಮನೆ ನಿರ್ಮಾಣಕ್ಕೆ ನಿಗಮದಿಂದ ಅನುಮತಿಯನ್ನು ಪಡೆಯಲಾಗಿದೆ. ಅದರಲ್ಲಿ ಅಂದಾಜು ಎರಡು ಸಾವಿರ ಫಲಾನು ಭವಿಗಳು ಈವರೆಗೂ ಮನೆಗಳನ್ನು ಆರಂಭಿಸಿಲ್ಲ. ಮನೆ ನಿರ್ಮಾಣಕ್ಕೆ ಎರಡು ಬಾರಿ ಗಡವು ನೀಡಲಾಗಿತ್ತು. ಕಾರಣಾಂತರಗಳಿಂದ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ಫಲಾನುಭವಿಗಳಿಗೆ ಕೊನೆ ಅವಕಾಶ ನೀಡಲಾಗಿದೆ.
ಮನೆ ಮತ್ತು ಜಾಗ ಇಲ್ಲದವರ ಪಟ್ಟಿಯನ್ನು ಸಿದ್ಧಪಡಿಸಿ ಗ್ರಾಮಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಂದು ಮನೆಗೆ ಸರ್ಕಾರ ರೂ. 63,500 ವೆಚ್ಚ ಮಾಡಲಿದೆ. ಎಸ್ಸಿ, ಎಸ್ಟಿಗೆ ರೂ. 50 ಸಾವಿರ ಸಬ್ಸಿಡಿ. ಇತರರಿಗೆ ರೂ. 25 ಸಾವಿರ ಸಬ್ಸಿಡಿ ಹಾಗೂ ರೂ. 25 ಸಾವಿರ ಸಾಲ ದೊರೆಯಲಿದೆ. ಸಾಲದ ಹಣವನ್ನು 180 ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಿದೆ.