ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಯೇಸುವಿನ ಹಬ್ಬ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಜನಿಸಿಹನಾರು ಗೋದಲಿಯೊಳು ವಿನಯದ ಶಿಶುವಾಗಿ
ವಿನಯದಿ ಮೆರೆಯುತ ಶಾಂತಿಯ ಬೀರುತ
ಅನುಪಮ ಸುಂದರ ಶಿಶುವಾಗಿಯೇ

ಎಂದೊಬ್ಬ ಕವಿ ಕ್ರಿಸ್ತನನ್ನು ಹಾಡಿ ಭಜಿಸಿದ್ದಾನೆ. ಇಂದು ಬಾಲಯೇಸುವಿನ ಹಬ್ಬ. ವಿವೇಕನಗರದ ಬಾಲಯೇಸುವಿನ ದೇವಾಲಯದಲ್ಲಿ ಅಪಾರ ಜನಜಾತ್ರೆ.

ಬಾಲಕೃಷ್ಣ, ಬಾಲಗಣಪರಂತೆಯೇ ಬಾಲಕನ ರೂಪದಲ್ಲಿ ಯೇಸುಕ್ರಿಸ್ತನನ್ನು ಪರಿಭಾವಿಸಿಕೊಂಡು ಪೂಜಿಸುವ ಈ ಆಚರಣೆ ಭಾರತೀಯ ಸಂಸ್ಕೃತಿಯ ನೆರಳಂತೆ ಅನಿಸಿದರೂ ಈ ಬಾಲಯೇಸು ಪರಿಕಲ್ಪನೆ ಮೂಡಿಬಂದದ್ದು ದೂರದ ಯುರೋಪಿನ ಪ್ರೇಗ್ ಎಂಬ ಊರಿನಿಂದ.

ಹಾಗೆ ನೋಡಿದರೆ ಬಾಲಕ ಯೇಸುವಿನ ಕುರಿತ ಸಂಗತಿಗಳು ಪವಿತ್ರ ಬೈಬಲಿನಲ್ಲಿ ಉಲ್ಲೇಖ ಗೊಂಡಿರುವುದು ಕಡಿಮೆ. ಯೇಸುವನ್ನು ಉದರದಲ್ಲಿ ಹೊತ್ತು ತುಂಬುಗರ್ಭಿಣಿ ಮೇರಿ ಮಾತೆ ತಮ್ಮ ಪತಿ ಜೋಸೆಫರೊಂದಿಗೆ ಕಡ್ಡಾಯ ಜನಗಣತಿಯ ಕಾರಣದಿಂದ ನೆಲೆನಿಂತ ಊರನ್ನು ಬಿಟ್ಟು ಪೂರ್ವಜರ ಊರಾದ ಬೆತ್ಲೆಹೇಮಿಗೆ ಬರಬೇಕಾಯಿತು.

ಅದಾಗಲೇ ಜನಗಣತಿಗೆ ಬಂದವರಿಂದ ಮನೆಗಳು ಭರ್ತಿಯಾಗಿದ್ದವು. ಜೋಸೆಫ ಮತ್ತು ಮರಿಯಾಳಿಗೆ ದನದ ಕೊಟ್ಟಿಗೆಯೇ ಗತಿಯಾಯ್ತು. ಕತ್ತೆಯ ಮೇಲೆ ಬಹುದೂರದ ಪ್ರಯಾಣ ಮಾಡಿ ಆಯಾಸಗೊಂಡಿದ್ದ ಬಿಮ್ಮನಸೆ ಮರಿಯಾಳಿಗೆ ಸರಿರಾತ್ರಿಯಲ್ಲಿ ಹೆರಿಗೆಯಾಗಿ ಗಂಡುಮಗು ಹುಟ್ಟಿತು. ಕರುಗಳಿಗೆ ಮೇವುಣ್ಣಿಸುವ ಗೊಂದಣಿಗೆ ಅಥವಾ ಗೋದಲಿಯೊಳಗೆ ಶಿಶುವನ್ನು ಮಲಗಿಸಿ ಜೋಸೆಫರು ಬಾಣಂತಿ ಮೇರಿಯ ಉಪಚಾರ ಮಾಡಿದರು.

ಆಗಸದಲ್ಲಿ ವಿಶೇಷ ನಕ್ಷತ್ರಗಳನ್ನು ಬೆಳಗಿಸಿದ ದೇವರು ಜನಗಣತಿಯ ಗುಂಗಿನಲ್ಲಿದ್ದವರನ್ನು ನಿರ್ಲಕ್ಷಿಸಿ ಬಯಲಲ್ಲಿ  ಕುರಿಮೇಯಿಸುತ್ತಿದ್ದ ಕುರುಬರಿಗೆ ಯೇಸುವಿನ ಮೊದಲ ದರ್ಶನ ಮಾಡಿಸಿದ. ಕೊಟ್ಟಿಗೆಯಲ್ಲಿ ಅದಾಗಲೇ ನೆಲೆಕಂಡಿದ್ದ ದನ-ಕರುಗಳು, ಕತ್ತೆಗಳು, ಆಡುಗಳು ಸಹ ಯೇಸುವಿನ ದರ್ಶನದಿಂದ ಪುಳಕಗೊಂಡವು.

ಟಿಬೆಟ್ಟಿನ ಬುದ್ಧ ಚರಿತೆಯ ಪ್ರಕಾರ ಬೋಧಿಸತ್ವನು ಯೇಸುವಿನ ರೂಪದಲ್ಲಿ ಜನಿಸಿದ್ದನ್ನು ಕಂಡುಕೊಂಡ ಜ್ಞಾನಿಗಳು ನಕ್ಷತ್ರದ ಜಾಡು ಹಿಡಿದು ದೀರ್ಘ ಪ್ರಯಾಣ ಮಾಡಿ ಶಿಶು ಯೇಸುವನ್ನು ಕಂಡು ಪುನೀತರಾದರು. ಆದರೆ ಆ ಜ್ಞಾನಿಗಳ ಮಾತು ಅಲ್ಲಿನ ರಾಜನಿಗೆ ರುಚಿಸದೆ, ಮಗು ಯೇಸು ಬೆಳೆದು ಮುಂದೆಂದೋ ತನ್ನ ವಿರೋಧಿಯಾಗುವ ಬದಲು ಇಂದೇ ಆತನನ್ನು ಇಲ್ಲವಾಗಿಸಿಬಿಟ್ಟರೆ ನೆಮ್ಮದಿ ಎಂದುಕೊಂಡು ತನ್ನ ರಾಜ್ಯದಲ್ಲಿನ ಶಿಶುಗಳನ್ನೆಲ್ಲ ಕೊಲ್ಲಿಸಿದ.

ಆದರೆ ಅಷ್ಟರಲ್ಲಿ ಮೇರಿ ಮತ್ತು ಜೋಸೆಫರು ಶಿಶುಸಮೇತ ಪಲಾಯನ ಮಾಡಿದರು. ಹೀಗೆ ಊರು ತೊರೆದ ಯೇಸು ಮತ್ತೆ ಕಾಣಿಸಿಕೊಂಡಿದ್ದು ತನ್ನ ಹನ್ನೆರಡನೇ ವಯಸ್ಸಿನಲ್ಲಿ. ಮುಂಜಿಗೆಂದು ಜೆರುಸಲೇಮಿನ ಗುಡಿಗೆ ಬರುವ ಆತ ಅಲ್ಲಿನ ಧರ್ಮಗುರುಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಗಲಿಬಿಲಿಗೊಳಿಸಿದ.

ಇಷ್ಟರ ಹೊರತು ಬಾಲಕ ಯೇಸುವಿನ ಬಾಲಲೀಲೆಗಳ ಕುರಿತಾಗಲೀ ಇನ್ನಾವುದೇ ವಿವರಗಳು ಸಿಗುವುದಿಲ್ಲ. ಜಾತಿಧರ್ಮಗಳ ಭೇದವಿಲ್ಲದೆ ಜನ ಯೇಸುವಿನೆಡೆಗೆ ಧಾವಿಸಿ ಬರುತ್ತಾರೆ.

ವಿವೇಕನಗರದಲ್ಲಿರುವ ಬಾಲಯೇಸು ದೇವಾಲಯ ಕಂಬಗಳಿಲ್ಲದೆ ರಚಿತವಾದ ಅರೆವರ್ತುಳಾಕಾರದ ದಿವ್ಯ ಭವ್ಯ ವಿಸ್ತಾರದ ಗುಡಿ. ಒಮ್ಮೆಗೇ ಹತ್ತು ಸಾವಿರ ಜನರು ನೆಮ್ಮದಿಯಾಗಿ ಕುಳಿತು ಯೇಸುಧ್ಯಾನ ಮಾಡಬಹುದಾದ ಸುಂದರ ತಾಣವಿದು. ಹಜಾರದ ಕೇಂದ್ರಸ್ಥಾನದಲ್ಲಿ ಯೇಸುಜನನದ ಬೃಹತ್ ಭಿತ್ತಿಯನ್ನು ಉಬ್ಬುಶಿಲ್ಪದಂತೆ ರಚಿಸಲಾಗಿದೆ. ಅಪೂರ್ವ ವರ್ಣಸಂಯೋಜನೆಯ ಈ ಚಿತ್ತಾರದಲ್ಲಿ ನಾಯಿಗಳೂ ಪಾರಿವಾಳಗಳೂ ಕ್ರಿಸ್ತಜನನಕ್ಕೆ ಸಾಕ್ಷಿಯಾಗಿವೆ.
 
ಗುಡಿಯ ಹೊರ ಆವರಣದಲ್ಲಿ ಚಪ್ಪಡಿ ಹಾಸಿನ ವಿಶಾಲ ಜಗಲಿಯಿದ್ದು ದೇವಾಲಯದ ಸೌಂದರ್ಯಕ್ಕೆ ಪೂರಕವಾಗಿದೆ. ಇದರ ಕೆಳಗೆ ನೆಲಮಾಳಿಗೆಯಲ್ಲಿ ಇನ್ನೂರು ಕಾರುಗಳ ನಿಲುಗಡೆಗೂ ವ್ಯವಸ್ಥೆಯಿದೆ. ಪುಸ್ತಕ ಮತ್ತು ಗಾನಮುದ್ರಿಕೆಗಳ ಮಾರಾಟ, ಹರಕೆ ವಸ್ತುಗಳ ಪ್ರದರ್ಶನ, ಹರಕೆಯ ಅಂಕಣ, ವಧುವರಾನ್ವೇಷಣಾ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳೊಂದಿಗೆ ನಳನಳಿಸುತ್ತಿರುವ ಈ ಧಾರ್ಮಿಕ ಕೇಂದ್ರವನ್ನು ಯಾರು ಯಾವಾಗ ಬೇಕಾದರೂ ಸಂದರ್ಶಿಸಿ ಧನ್ಯರಾಗಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT