ದಾವಣಗೆರೆ: ಪಾತ್ರೆ ಉರುಳಿ ಬಿಸಿ ಗಂಜಿ ಬಿದ್ದು ಮೂವರು ಅಂಗನವಾಡಿ ಮಕ್ಕಳು ಗಾಯಗೊಂಡ ಘಟನೆ ಇಲ್ಲಿನ ಎಪಿಎಂಸಿ ಯಾರ್ಡ್ ಬಳಿಯಿರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ನಡೆದಿದೆ. ಅನ್ನ ಬಸಿಯುವಾಗ ಪಾತ್ರೆ ಜಾರಿ ಬಿತ್ತು. ಅದರಿಂದ ಸುರಿದ ಬಿಸಿ ಗಂಜಿ ಮಕ್ಕಳ ಮೈಮೇಲೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಹನುಮಂತಪ್ಪ -ಜ್ಯೋತಿ ದಂಪತಿಯ ಪುತ್ರ ಗಗನ್ (4) ಗಂಭೀರವಾಗಿ ಗಾಯಗೊಂಡಿದ್ದಾನೆ. ಕೈಕಾಲು ಮತ್ತು ಹೊಟ್ಟೆಯ ಭಾಗಗಳು ಸುಟ್ಟಿದ್ದು, ಶೇ 70ರಷ್ಟು ಸುಟ್ಟಗಾಯಗಳಾಗಿವೆ. ಈತನನ್ನು ನಗರದ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಸೌಮ್ಯಾ ಮತ್ತು ಕಾರ್ತಿಕ್ರ ಕೈಕಾಲಿಗೆ ಗಾಯಗಳಾಗಿವೆ. ಕಾರ್ತಿಕ್ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ, ಸೌಮ್ಯಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮುಷ್ಕರಕ್ಕೆ ಕಾರ್ಯಕರ್ತೆ: ಘಟನೆ ಸಂದರ್ಭ ಇಲ್ಲಿನ ಕಾರ್ಯಕರ್ತೆ ಪುಟ್ಟಮ್ಮ ಅವರು ತಾಲ್ಲೂಕು ಕಚೇರಿ ಆವರಣದಲ್ಲಿ ತಮ್ಮ ಸಂಘಟನೆ ವತಿಯಿಂದ ನಡೆಯುತ್ತಿರುವ ಮುಷ್ಕರಕ್ಕೆ ತೆರಳಿದ್ದರು. ಕೇಂದ್ರದಲ್ಲಿ ಸಹಾಯಕಿ ಕೆಂಚವೀರಮ್ಮ ಅವರೊಬ್ಬರೇ ಮಕ್ಕಳನ್ನು ಹಾಗೂ ಅಡುಗೆ ಕೆಲಸ ನಿಭಾಯಿಸುತ್ತಿದ್ದರು. ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸುಮಾರು 35ರಿಂದ 40 ಮಕ್ಕಳಿದ್ದಾರೆ.