ಬೆಂಗಳೂರು: ಪಾನಮತ್ತನಾಗಿ ಮಲಗಿದ್ದ ವೈದ್ಯನಿಗೆ ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿರುವ ಘಟನೆ ಉತ್ತರಹಳ್ಳಿ ಮುಖ್ಯರಸ್ತೆ ಬಳಿಯ ಶ್ರೀನಿವಾಸಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.
ಶ್ರೀನಿವಾಸಪುರ ನಿವಾಸಿ ಡಾ.ಶಿವಕುಮಾರ್ (47) ಮೃತಪಟ್ಟವರು. ಮೂಲತಃ ಬೀದರ್ನ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿದ್ದರು.
ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ಅವರು ಮದ್ಯವ್ಯಸನಿಯಾಗಿದ್ದರು. ಮನೆಯಲ್ಲೇ ರಾತ್ರಿ ಮದ್ಯಪಾನ ಮಾಡಿದ್ದ ಅವರು, ಸಿಗರೇಟು ಸೇದಿ ಅದರ ತುಂಡನ್ನು ಹಾಸಿಗೆ ಬಳಿ ಎಸೆದಿದ್ದರು. ಅವರು ನಿದ್ರೆ ಮಾಡುತ್ತಿದ್ದ ವೇಳೆ ಸಿಗರೇಟಿನ ತುಂಡಿನಿಂದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಸ್ವಲ್ಪ ಸಮಯದಲ್ಲೇ ಅವರಿಗೂ ಹೊತ್ತಿಕೊಂಡು ತೀವ್ರ ಸುಟ್ಟ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಕುಮಾರ್ ಅವರ ಮನೆಯ ಒಳ ಭಾಗದಿಂದ ಶುಕ್ರವಾರ ಬೆಳಿಗ್ಗೆ ಹೊಗೆ ಬರುತ್ತಿದ್ದನ್ನು ನೋಡಿದ ನೆರೆಹೊರೆಯವರು, ಮನೆಯ ಬಳಿ ಹೋಗಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.