ಕುಮಟಾ: ಮಂಗಳವಾರ ಇಲ್ಲಿ ಭಾರಿ ಮಳೆ ಸುರಿದದ್ದರಿಂದ ವಾಹನ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಯಿತು.
ವರ್ಷದ ಅಧಿಕೃತ ಮಳೆ ಜೂನ್ 7 ರಿಂದ ಆರಂಭವಾಗುತ್ತದೆ ಎನ್ನುವುದು ಜನರ ನಂಬಿಕೆಯಾಗಿತ್ತು. ಆದರೆ ಇನ್ನೆರಡು ದಿನದಲ್ಲಿ ಮಳೆಯಾಗುತ್ತದೆ ಎನ್ನುವ ಹವಾಮಾನ ಇಲಾಖೆ ವರದಿಯನ್ನೂ ಮೀರಿ ಎರಡು ದಿನ ಮೊದಲೇ ಆರಂಭವಾದ ಮಳೆಯಲ್ಲಿ ಕೊಡೆ ಇಲ್ಲದವರು ಮಂಗಳವಾರ ಒದ್ದೆಯಾಗಬೇಕಾಯಿತು.
ಬೆಳಿಗ್ಗೆ ಶಾಲೆ- ಕಾಲೇಜು, ಕಚೇರಿಗೆ ಹೋಗುವವರು ಮಳೆಯಲ್ಲಿ ನೆನೆಯುತ್ತಾ ಸಾಗಿದರು. ಪಟ್ಟಣದ ಗಟಾರವೆಲ್ಲ ತುಂಬಿ ಒಳಗಿದ್ದ ಕಸ, ಪ್ಲಾಸ್ಟಿಕ್ ಚೀಲಗಳು ರಸ್ತೆಯ ಮೇಲೆ ರಾಶಿ-ರಾಶಿಯಾಗಿ ಬಿದ್ದು ಓಡಾಟಕ್ಕೆ ತೊಂದರೆಯಾಯಿತು.
ಔಷಧ ಸಿಂಪರಣೆಗೆ ಅಡ್ಡಿ
ಕಳೆದ ವರ್ಷದಿಂದ ಮಳೆ ಬೀಳುವ ಮೊದಲು ಅಡಿಕೆ ಗೊನೆಗಳಿಗೆ `ಬಯೋಫೈಟ್~ ಎಂಬ ಕೊಳೆನಾಶಕ ಔಷಧಿ ಹೊಡೆಯುತ್ತಿದ್ದವರಿಗೆ ಮಂಗಳವಾರ ಸುರಿದ ಮಳೆ ಅಡ್ಡಿಯಾಯಿತು.
ಮಳೆ ಬಿದ್ದ ನಂತರ ಹೊಡೆಯುವ ಮೈಲು ತುತ್ತೆ ಔಷಧಿ ಸಿಂಪರಣೆಗಿಂತ `ಬಯೋಫೈಟ್~ ಎಂಬ ಹೊಸ ಔಷಧಿ ಅಡಿಕೆ ಕೊಳೆ ರೋಗ ನಿವಾರಣೆಗೆ ಹೆಚ್ಚು ಪರಿಣಾಮಕಾರಿ ಎಂದು ನಂಬಿರುವ ರೈತರು ಮೇ ಮೊದಲ ವಾರದಿಂದಲೇ ಅದರ ಸಿಂಪರಣೆ ಆರಂಭಿಸಿದ್ದರು.
ಮಳೆಗೆ ಮೊದಲು `ಬಯೋ ಫೈಟ್~, ಮಳೆಯೇನಾದರೂ ಜಾಸ್ತಿಯಾದರೆ ಮೈಲು ತುತ್ತೆ ಮದ್ದು ಸಿಂಪರಣೆಗೆ ರೈತರು ಸಿದ್ಧರಾಗಿದ್ದಾರೆ. ಮಳೆಯ ಜಾರಿಕೆಯಲ್ಲಿ ಅಡಿಕೆ ಮರ ಹತ್ತಿ ಕೊಳೆ ಮದ್ದು ಹೊಡೆಯುವುದಕ್ಕಿಂತ ಮಳೆಗೆ ಮೊದಲೇ `ಬಯೋಫೈಟ್~ ಸಿಂಪರಣೆ ಕೆಲಸ ಕೂಲಿಗಳಿಗೂ ಹೆಚ್ಚು ಅನುಕೂಲ. ಮಳೆಗಾಲದ ಉರುವಲಿಗೆ ಕಟ್ಟಿಗೆ ಸಂಗ್ರಹ, ಮನೆ, ಕೊಟ್ಟಿಗೆಗಳ ಮಾಡು ದುರಸ್ತಿ ಕೆಲಸ ಇನ್ನು ಬಾಕಿ ಇರುವಾಗಲೇ ಮಳೆ ಬಂದದ್ದು ಹೆಚ್ಚಿನವರಿಗೆ ತೊಂದರೆಯಾಗಿದೆ. ಪಟ್ಟಣದಲ್ಲಿ ಮಂಗಳವಾರ 5.5 ಮಿಲಿ ಮೀಟರ್ ಮಳೆ ದಾಖಲಾಗಿದೆ.