ಬೆಳಗಾವಿ: ಮಹಿಳೆಯರ ಮತ್ತು ಮಕ್ಕಳ ಅಪಹರಣ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇದನ್ನು ತಡೆಯಲು ಸರ್ಕಾರ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂಥ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ, ಮಹಿಳೆಯರ ಸಾಗಾಟದತಹ ಸಂಘಟಿತ ಅಪರಾಧವನ್ನು ತಡೆಗಟ್ಟುವ ಅಗತ್ಯತೆ ಇದೆ ಎಂದು ನ್ಯಾಯಾಧೀಶ ರವಿ ನಾಯ್ಕ ಹೇಳಿದರು.
ಇಲ್ಲಿನ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ `ಕೌಟುಂಬಿಕ ದೌರ್ಜನ್ಯ ಕಾಯ್ದೆ-2005~ರ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೌಟುಂಬಿಕ ಕಲಹಗಳು, ಅನ್ಯಾಯ, ಅತ್ಯಾಚಾರ, ದೌರ್ಜನ್ಯ ಮುಂತಾದ ಸಮಸ್ಯೆಗೊಳಗಾದ ಮಹಿಳೆಯರಿಗೆ ನೆರವಾಗಲು ಕೇಂದ್ರ ಸರ್ಕಾರ ಕೌಟುಂಬಿಕ ದೌರ್ಜನ್ಯ ಅಧಿನಿಯ ಜಾರಿಗೆ ತಂದಿದೆ. ನ್ಯಾಯವಾದಿ ಭಾರತಿ ವಾಳವೇಕರ ಮಾತನಾಡಿ, ಸಾಗಾಣಿಕೆಗೆ ಒಳಗಾದ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿಗಾಗಿ ಸರ್ಕಾರ ಉಜ್ವಲಾ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ವಸತಿ, ಕಾನೂನು ನೆರವು, ವೃತ್ತಿ ತರಬೇತಿ, ರಕ್ಷಣೆ, ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.ಮಂದಾಕಿನಿ ಅಪ್ಪುಗೋಳ, ಕೌಟಂಬಿಕ ದೌರ್ಜನ್ಯ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಪ್ರಾಚಾರ್ಯೆ ಭಾರತಿ ಮಠದ ಅಧ್ಯಕ್ಷತೆ ವಹಿಸಿದ್ದರು. ಎ.ಎಸ್. ಮರಿಕಟ್ಟಿ, ಬಿ.ಎಂ.ಹೊಸಪೇಟಿ, ಹೊಸಮಠ, ವೈಜಯಂತಿ ಚೌಗಲಾ ಉಪಸ್ಥಿತರಿದ್ದರು.