ಮೈಸೂರು: ಕಳೆದ ಮೂರು ವರ್ಷಗಳಿಂದ ಖಾಲಿ ಇದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನೂತನ ಅಧ್ಯಕ್ಷರಾಗಿ ಪಾಲಿಕೆ ಸದಸ್ಯ ಎಲ್.ನಾಗೇಂದ್ರ ಗುರುವಾರ ಅಧಿಕಾರ ಸ್ವೀಕರಿಸಿದರು. ನಾಗೇಂದ್ರ ಬೆಳಿಗ್ಗೆ 11.30ಕ್ಕೆ ಮುಡಾಗೆ ಆಗಮಿಸಿದಾಗ ಕಚೇರಿಯ ಆವರಣದಲ್ಲಿ ಜಮಾಯಿಸಿದ್ದ ಅಭಿ ಮಾನಿಗಳು, ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ವಾದ್ಯಗಳೊಂದಿಗೆ ಸ್ವಾಗತಿಸಿದರು. ನಾಗೇಂದ್ರ ಅವರು ನೇರವಾಗಿ ಆವರಣದಲ್ಲಿದ್ದ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆಸಲ್ಲಿಸಿದರು.
ಬಳಿಕ ಅಧ್ಯಕ್ಷರ ಕೊಠಡಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋ.ಮಧುಸೂದನ್, ತೋಂಟದಾರ್ಯ, ಪ್ರೊ. ಮಲ್ಲಿಕಾರ್ಜುನಪ್ಪ, ಬಿಜೆಪಿ ನಗರಾಧ್ಯಕ್ಷ ಶಿವಕುಮಾರ್, ಪಾಲಿಕೆ ಸದಸ್ಯರಾದ ಶಿವಕುಮಾರ್, ಪಾರ್ಥಸಾರತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ನಂಜುಂಡಸ್ವಾಮಿ, ಮುಖಂಡರಾದ ಯಶಸ್ವಿನಿ ಸೋಮಶೇಖರ್ ಸೇರಿದಂತೆ ಪಕ್ಷದ ಹಲವಾರು ಕಾರ್ಯಕರ್ತರು, ಮುಖಂಡರು ಹಾಜರಿದ್ದರು.
ಅಭಿಮಾನಿಗಳ ಮಹಾಪೂರ: ನಾಗೇಂದ್ರ ಅವರನ್ನು ಅಭಿನಂದಿಸಲು ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೆಳಿಗ್ಗೆ 10.30 ಗಂಟೆಯಿಂದಲೇ ಮುಡಾ ಆವರಣದಲ್ಲಿ ಜಮಾಯಿಸಿ ಹೂವಿನ ಹಾರ ಹಾಗೂ ಬೊಕ್ಕೆಗಳನ್ನು ಹಿಡಿದು ಕಾದು ಕುಳಿತಿದ್ದರು. ನಾಗೇಂದ್ರ ಅವರನ್ನು ಅಭಿನಂದಿಸಿ, ಸಿಹಿಯನ್ನು ವಿತರಿಸಿ ಹರ್ಷವ್ಯಕ್ತಪಡಿಸಿದರು.