ಬೆಂಗಳೂರು(ಪಿಟಿಐ):ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ `ಮೈಲಿಗಲ್ಲು~ ಸ್ಥಾಪಿಸಿದ್ದ ಇನ್ಫೋಸಿಸ್, ಈಗ ಆ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಕಠಿಣ ಸಂದರ್ಭದಲ್ಲಿದೆ. ಇದೇ ವೇಳೆ, ಇನ್ಫೋಸಿಸ್ ಅಧ್ಯಕ್ಷ ಕೆ.ವಿ.ಕಾಮತ್, `ಕಂಪೆನಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಹೊಸ ಕಾರ್ಯತಂತ್ರ ನೆರವಾಗಲಿದೆ. ಜತೆಗೆ, ಭವಿಷ್ಯದಲ್ಲಿ ಹೆಚ್ಚಿನ ಪ್ರಗತಿಗೆ ಶಕ್ತಿ ತುಂಬಲಿದೆ~ ಎಂದಿದ್ದಾರೆ.
ನಗರದಲ್ಲಿ ಶನಿವಾರ ಕಂಪೆನಿಯ ಷೇರುದಾರರ 31ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಕಾಮತ್, ಸದ್ಯ ಐಟಿ ಕ್ಷೇತ್ರದಲ್ಲಿ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನಾವೀಗ `ಇನ್ಫೋಸಿಸ್-3.0~ ಎಂಬ ಹೊಸ ಪ್ರಗತಿ ಸೂತ್ರವನ್ನು ಘೋಷಿಸಿದ್ದೇವೆ ಎಂದರು.
ಕಳೆದ ಆಗಸ್ಟ್ನಲ್ಲಿ `ಇನ್ಫೋಸಿಸ್~ ನೇತೃತ್ವ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕಂಪೆನಿಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಕೆ.ವಿ.ಕಾಮತ್, ಕಂಪೆನಿಯ ಸಾಮರ್ಥ್ಯವೃದ್ಧಿಗೆ ಅಗತ್ಯವಾದ ಹೂಡಿಕೆಯನ್ನೂ ಮಾಡಲಾಗುವುದು. ಜತೆಗೆ ಗ್ರಾಹಕ ಕಂಪೆನಿಗಳ ಬೇಡಿಕೆಗಳನ್ನು ಪೂರೈಸುವುದಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಇದೇ ನಿಟ್ಟಿನಲ್ಲಿ ನಾವು ಕಂಪೆನಿಯ ಚಟುವಟಿಕೆಗಳನ್ನು ವಿಶಾಲ ದೃಷ್ಟಿಕೋನದಲ್ಲಿ ಮರು ರೂಪಿಸಿದ್ದೇವೆ. 1- ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರ, 2- ತಯಾರಿಕಾ ಕ್ಷೇತ್ರ-ಇಂಧನ, ಸಂಪರ್ಕ ವಲಯ ಮತ್ತು ಸೇವೆಗಳು, 3- ಚಿಲ್ಲರೆ ಮಾರಾಟ ವಲಯ ಮತ್ತು ಗ್ರಾಹಕ ಬೇಡಿಕೆಯ ಪ್ಯಾಕೇಜ್ಡ್ ವಸ್ತುಗಳು, ಸರಕು ಸಾಗಣೆ ಹಾಗೂ 4- ಜೀವ ವಿಜ್ಞಾನ ಎಂದು ನಾಲ್ಕು ಪ್ರಮುಖ ವಿಭಾಗಗಳಾಗಿ ವಿಭಜಿಸಿಕೊಂಡಿದ್ದೇವೆ. ಈ ರೀತಿಯ ಹೊಸ ಕಾರ್ಯತಂತ್ರ ನಮಗೆ ಖಂಡಿತ ಯಶಸ್ಸು ತಂದುಕೊಡಲಿದೆ ಎಂಬ ವಿಶ್ವಾಸವಿದೆ. ಕಂಪೆನಿಯ ಪ್ರಗತಿಗತಿಗೆ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾರ್ಚ್ 31ಕ್ಕೆ ಕೊನೆಗೊಂಡ 2011-12ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಗಳಿಕೆಯಲ್ಲಿ ಕೇವಲ ಶೇ 27.4ರಷ್ಟು ಪ್ರಗತಿಯನ್ನಷ್ಟೇ ಇನ್ಫೋಸಿಸ್ ದಾಖಲಿಸಿತ್ತು. ಇದು ಕಂಪೆನಿಯೇ ನಿಗದಿಪಡಿಸಿಕೊಂಡಿದ್ದ ಗುರಿಗಿಂತ ಕಡಿಮೆ ಇದ್ದಿತು. ಅಲ್ಲದೆ, 2012-13ನೇ ಸಾಲಿನಲ್ಲಿ ಶೇ 8ರಿಂದ 10ರಷ್ಟು ಮಾತ್ರದ ವರಮಾನ ಗಳಿಕೆ ಮುನ್ನೋಟವನ್ನಷ್ಟೇ ಕಂಪೆನಿ ನೀಡಿದೆ. ಇದು `ನಾಸ್ಕಾಂ~ ಅಂದಾಜು ಮಾಡಿದ್ದ ಶೇ 11-14ರ ಪ್ರಮಾಣಕ್ಕಿಂತ ಬಹಳ ಕಡಿಮೆ ಇದೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.