ಬಾಣಾವರ: ಈಗ ಎ್ಲ್ಲಲೆಡೆ ಎನ್ಎಸ್ಎಸ್ ಶಿಬಿರಗಳ ಉತ್ಸಾಹ ಆರಂಭವಾಗಿದೆ. ಕಾಲೇಜು ವಿದ್ಯಾರ್ಥಿಗಳು ಒಂದಿಷ್ಟು ದಿನ ಗ್ರಾಮಗಳಲ್ಲಿ ಶ್ರಮದಾನ ಮಾಡುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾ ಹೊಸ ಅನುಭವ ಪಡೆಯುತ್ತಿದ್ದಾರೆ.
ಬಾಣಾವರ ಹೋಬಳಿಯ ಬಾಗಿಲುಘಟ್ಟ ಗ್ರಾಮದಲ್ಲಿ ಒಂದು ವಾರದ ಕಾಲ ನಡೆದ ಎನ್ಎಸ್ಎಸ್ ಶಿಬಿರದಲ್ಲಿ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮಸ್ಥರೂ ಸಾಥ್ ನೀಡಿ ಶಿಬಿರದ ರಂಗು ಹೆಚ್ಚಿಸಿದರು. ಶಿಬಿರದ ಕಾರ್ಯಕ್ರಮಗಳು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದವು. ಗ್ರಾಮದೆಲ್ಲೆಡೆ ವಿದ್ಯಾರ್ಥಿಗಳ ಕಲರವ. ಅವರ ಶ್ರಮದಾನದಿಂದ ಗ್ರಾಮದ ರಸ್ತೆಗಳು, ದೇಗುಲಗಳ ಆವರಣ, ಚರಂಡಿಗಳು ಸ್ವಚ್ಛಗೊಂಡವು. ಇಂಗು ಗುಂಡಿ ನಿರ್ಮಿಸಿದರು.
ಪಶುಗಳ ಆರೋಗ್ಯ ತಪಾಸಣೆ ಕಾರ್ಯಕ್ರಮ ಸೇರಿದಂತೆ ವಿವಿಧ ಜನಪಯೋಗಿ ಕಾರ್ಯಕ್ರಮಗಲು ಜರುಗಿದವು. ಗ್ರಾಮೀಣ ಜನರಿಗೆ ಪರಿಸರ ರಕ್ಷಣೆಯ ಜಾಗೃತಿ, ಗ್ರಾಮೀಣ ಕಲೆಗಳನ್ನು ಪೋಷಿಸುವ ಬಗೆ, ಆಯುರ್ವೇದ ಚಿಕಿತ್ಸೆ ಕುರಿತು ಅರಿವು ಮೂಡಿಸಿದರು.
ಶಿಬಿರವು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಯಿತು. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಪರಿ, ಗ್ರಾಮೀಣ ಜೀವನದ ರೀತಿಯನ್ನು ವಿದ್ಯಾರ್ಥಿಗಳು ತಿಳಿದು ಕೊಂಡರು ಎನ್ನುತ್ತಾರೆ ಶಿಬಿರಾಧಿಕಾರಿ ವಿ.ಬಿ.ಫಾಲಾಕ್ಷಯ್ಯ.