ಪಾವಗಡ: ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ತಾಲ್ಲೂಕು ರಾಷ್ಟ್ರೀಯ ಕಿಸಾನ್ ಸಂಘ ಹಾಗೂ ಅಂಗವಿಕಲರ ಒಕ್ಕೂಟದ ವತಿಯಿಂದ ಸೋಮವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಲಾಯಿತು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಿಸಾನ್ ಸಂಘದ ಗೌರವ ಅಧ್ಯಕ್ಷ ರಾಮರೆಡ್ಡಿ, ಪ್ಲೋರೈಡ್ ಮಿಶ್ರಿತ ವಿಷಪೂರಿತ ನೀರನ್ನು ನಿತ್ಯ ಸೇವಿಸಿ ಭಯಂಕರ ರೋಗಗಳಿಗೆ ಬಲಿಯಾಗುತ್ತಿರುವ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಿ ಎಂದು ಮಾಡಿದ ಮನವಿಗಳು ನಿರರ್ಥಕವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಯಾವುದೇ ಅನುಕೂಲ ಪ್ರಕಟಿಸದು. ನಾವು ಹೋರಾಟ ಮಾಡಿ ಪಡೆದುಕೊಳ್ಳಬೇಕು ಎಂಬುದನ್ನು ತಾಲ್ಲೂಕಿನ ಜನತೆ ಮನಗಾಣಬೇಕು ಎಂದ ಅವರು, ಪ್ಲೋರೈಡ್ಯುಕ್ತ ವಿಷಪೂರಿತ ನೀರು ಕುಡಿಯುವುದರಿಂದ ಜನತೆ ಭಯಂಕರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಶಾಶ್ವತ ನೀರಾವರಿ ಸೌಲಭ್ಯ ಎಂದರು.
ರಾಷ್ಟ್ರೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಮಾತನಾಡಿ, ಮನವಿಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಜೀವ ಉಳಿಸಿಕೊಳ್ಳಲು ಉಗ್ರ ಹೋರಾಟ ಒಂದೇ ಉಳಿದಿರುವ ಮಾರ್ಗ ಎಂದರು.
ವಿ.ನಾಗಭೂಷಣರೆಡ್ಡಿ ತಾಲ್ಲೂಕಿನ ಸಮಸ್ಯೆ ವಿವರಿಸಿದರು. ಪ್ರತಿಭಟನೆಯಲ್ಲಿ ಮಂಜುಳಾ, ಡಾ.ಸ್ವಾಮಿ, ವೆಂಕಟೇಶರೆಡ್ಡಿ, ಈರದಾಸಪ್ಪ, ರಾಮಾಂಜನಪ್ಪ, ಆರ್.ಹನುಮಂತರಾಯಪ್ಪ, ಸ್ವಾಮಿ ವಿವೇಕಾನಂದ ಅಂಗವಿಕಲರ ಒಕ್ಕೂಟದ ಸದಸ್ಯರ ಜತೆ ವಿವಿಧ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.