ಕಡೂರು: ಪರಿಶುದ್ಧ ನೀರು ಮನುಷ್ಯನ ಅಗತ್ಯಗಳಲ್ಲಿ ಒಂದು. ಶುದ್ಧ ನೀರಿನ ಸೇವನೆಯಿಂದ ಮನುಷ್ಯ ಉತ್ತಮ ಆರೋಗ್ಯ ಪಡೆಯಬಲ್ಲ. ಆದ್ದರಿಂದ ಶುದ್ಧ ನೀರು ದಿವ್ಯ ಔಷಧಿ ಇದ್ದಂತೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಎಸ್.ಪದ್ಮನಾಭ ಭಟ್ ತಿಳಿಸಿದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇವನೂರು ಗ್ರಾಮದಲ್ಲಿ ಸ್ಥಾಪಿಸಲಿರುವ ಶುದ್ಧಗಂಗಾ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಮಂಡಳಿ ಶ್ರಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರು ನೀಡುವ ದೃಷ್ಠಿಯಲ್ಲಿ ದೇವನೂರು ಗ್ರಾಮದ ಶುದ್ಧಗಂಗಾ ಘಟಕಕ್ಕೆ ರೂ. 5 ಲಕ್ಷ ಸಹಾಯ ಧನ ನೀಡಿರುವುದಾಗಿ ತಿಳಿಸಿದರು.
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮಾತನಾಡಿ, ಶುದ್ಧಗಂಗಾ ಘಟಕದೊಳಗೆ ರಾಜಕೀಯ ತರಬಾರದು. ಕಡೂರು ತಾಲ್ಲೂಕಿನ ದೇವನೂರು, ಸಖರಾಯಪಟ್ಟಣ ಹೋಬಳಿಗಳ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ವತಿಯಿಂದ 1200 ಚದರ ಅಡಿಗಳನ್ನು ಶುದ್ಧಗಂಗಾ ಕುಡಿಯುವ ಘಟಕಕ್ಕೆ ನಿವೇಶನ ನೀಡಿರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ ಹೇಳಿದರು.
ತಾ.ಪಂ. ಅಧ್ಯಕ್ಷೆ ಎ.ಇ ರತ್ನ, ಕಡೂರು ಎಪಿಎಂಸಿ ನಿರ್ದೇಶಕ ಚಿಕ್ಕದೇವನೂರು ರವಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಜಯರಾಮ ನೆಲ್ಲಿತಾಯ, ತಾ.ಯೋಜನಾಧಿಕಾರಿ ದಿನೇಶ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ಚಂದ್ರಶೇಖರ್, ಮೇಲ್ವಿಚಾರಕ ಪುರುಷೋತ್ತಮ್, ಮಹೇಶ್ ಮತ್ತಿತರರು ಇದ್ದರು.