ಬೆಂಗಳೂರು: ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ದೂರಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ಚುನಾವಣಾ ಅಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ರಾಜ್ಯ ವಿಧಾನಸಭೆಗೆ 2008ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೋಭಾ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಕೆಲವು ಅಂಶಗಳನ್ನು ದಾಖಲು ಮಾಡಿಲ್ಲ ಎಂದು ಎನ್.ಹನುಮೇಗೌಡ ಎಂಬುವರು ದೂರು ನೀಡಿದ್ದಾರೆ.
`ಯಲ್ಲಮ್ಮ ಮಿನರಲ್ಸ್ ಪ್ರೈ. ಲಿಮಿಟೆಡ್ನ ನಿರ್ದೇಶಕರು ಎಂಬುದನ್ನು ಶೋಭಾ ಅವರು ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿಲ್ಲ. ಇದು ನಿಯಮ ಉಲ್ಲಂಘನೆ. ಶೋಭಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು~ ಎಂದು ಗೌಡರು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಆಯೋಗ ಆ ಕುರಿತು ತನಿಖೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗೆ ಸೂಚಿಸುವ ಸಾಧ್ಯತೆ ಇದೆ. ಒಂದು ವೇಳೆ ಶೋಭಾ ತಪ್ಪೆಸಗಿರುವುದು ಪತ್ತೆಯಾದರೆ ಅವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ತನಿಖೆ ಆಗಲಿ: `ಆರೋಪ ಕುರಿತು ತನಿಖೆ ಆಗಲಿ. ಸತ್ಯ ಏನೆಂದು ಜನರಿಗೆ ಗೊತ್ತಾಗಲಿ~ ಶೋಭಾ ಪ್ರತಿಕ್ರಿಯಿಸಿದ್ದಾರೆ.