‘ರಾಹುಲ್ ಸಮರ್ಥ ನಾಯಕ’
ಮುಂಬೈ (ಪಿಟಿಐ): ರಾಹುಲ್ ಗಾಂಧಿ ಸಮರ್ಥ ಮತ್ತು ಶ್ರೇಷ್ಠ ನಾಯಕರಾಗಿದ್ದು ಪ್ರಧಾನಿಯಾಗಲು ಯೋಗ್ಯರಾಗಿದ್ದಾರೆ ಎಂದು ಕೇಂದ್ರ ಇಂಧನ ಸಚಿವ ವೀರಪ್ಪ ಮೊಯಿಲಿ ಹೇಳಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಹುಲ್ ಅತ್ಯಂತ ಸಮರ್ಥ ಯುವ ನಾಯಕ. ಅವರೇ ಕಾಂಗ್ರೆಸ್ನ ನಿಜವಾದ ನಾಯಕರು ಕೂಡ ಆಗಿದ್ದಾರೆ’ ಎಂದು ಹೇಳಿದರು.
ಜಾಮೀನು ಅರ್ಜಿ ವಜಾ
ಮುಂಬೈ (ಪಿಟಿಐ): 2008ರಲ್ಲಿ ನಡೆದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪ್ರವೀಣ ಟಕ್ಕಲ್ಕಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಆರೋಪಿ ವಿರುದ್ಧ ನಂಬಲರ್ಹ ಸಾಕ್ಷ್ಯಾಧಾರಗಳು ಇರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಟಕ್ಕಲ್ಕಿ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಪಿ.ವಿ. ಹರ್ದಾಸ್ ನೇತೃತ್ವದ ಪೀಠ ತಿರಸ್ಕರಿಸಿದೆ.
ಲಿಂಗ ತಾರತಮ್ಯ: ಹೈಕೋರ್ಟ್ ಆದೇಶ
ನವದೆಹಲಿ (ಐಎಎನ್ಎಸ್): ನ್ಯಾಯಾಧೀಶರು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ತೀರ್ಪು ನೀಡುವಾಗ ಯಾವುದೇ ಲಿಂಗ ತಾರತಮ್ಯದ ಮತ್ತು ಸಂವೇದನಾರಹಿತ ಟೀಕೆ ಮಾಡದಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಇಲ್ಲಿನ ತ್ವರಿತ ನ್ಯಾಯಾಲಯವೊಂದು ಮಾಡಿದ ಇಂತಹ ಎರಡು ಟೀಕೆಗಳನ್ನು ಕೈಬಿಡುತ್ತಾ, ನ್ಯಾಯಮೂರ್ತಿಗಳಾದ ಪ್ರದೀಪ್ ನಂದ್ರಜಾಗ್ ಮತ್ತು ವಿ.ಕೆ. ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ತ್ವರಿತ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ತೀರ್ಪು ನೀಡುವ ಸಂದರ್ಭದಲ್ಲಿ ಮಹಿಳೆಯರ ವಿರುದ್ಧ ಸಾಮಾನ್ಯ ವ್ಯಾಖ್ಯಾನ ಮಾಡಿದ್ದನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ಪೀಠ ಈ ಅಭಿಪ್ರಾಯ ಸೂಚಿಸಿದೆ.
ಕಪ್ಪು ಹಣ ನಿಯಂತ್ರಣಕ್ಕೆ ಕ್ರಮ
ನವದೆಹಲಿ (ಪಿಟಿಐ): ಕಪ್ಪು ಹಣ ವರ್ಗಾವಣೆ ತಡೆಯಲು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಲು ದ್ವೀಪ ರಾಷ್ಟ್ರವಾದ ಸೈಪ್ರಸ್ ಸೇರಿದಂತೆ ಎಂಟು ರಾಷ್ಟ್ರಗಳಲ್ಲಿ ಆರಂಭಿಸಲಾಗಿರುವ ಸಾಗರೋತ್ತರ ಆದಾಯ ತೆರಿಗೆ ಕಚೇರಿಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಕ್ಕೆ ಪ್ರಧಾನಿ ಕಚೇರಿಯಿಂದ ಹಸಿರು ನಿಶಾನೆ ದೊರಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.