ಗದಗ: ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಗವಾಯಿ ಅವರು ಅಂಧ, ಅನಾಥ ಮಕ್ಕಳ ಬದುಕಿನಲ್ಲಿ ಬೆಳಕು ಮೂಡಿಸಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲು ಶ್ರಮಿಸಿದ್ದಾರೆ ಎಂದು ಕ್ಷೌರಿಕ ಹಿತರಕ್ಷಣಾ ವೇದಿಕೆ ರಾಜ್ಯ ಜಂಟಿ ಕಾರ್ಯದರ್ಶಿ ಕೃಷ್ಣ ಹಡಪದ ಹೇಳಿದರು.
ಸವಿತಾ ಸಮಾಜ ಸುಧಾರಣಾ ಸಂಘದ ವತಿಯಿಂದ ಇತ್ತೀಚೆಗೆ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ಕೇಶ ಮುಂಡನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಗೀತ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿರುವ ಪುಟ್ಟರಾಜರು ಅಪಾರ ಸಂಖ್ಯೆಯಲ್ಲಿ ತಮ್ಮ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಅಂಧರಿಗಾಗಿ ಅವರು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅವರ ಆದರ್ಶ ಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಲಹೆ ನೀಡಿದರು.
ಡಾ. ಪಂಡಿತ ಪುಟ್ಟರಾಜರ ಪುಣ್ಯಸ್ಮರಣೆ ನಿಮಿತ್ಯ ಪುಟ್ಟರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿಠ್ಠಲ ದಿವಡೆ, ಗಣೇಶ ಕಡೇಮನಿ, ಜುಮ್ಮಣ್ಣ ಕಡಮೂರ, ಹುಲಗಪ್ಪ ಅನವಾಳ, ರಾಜು ಹಾದಿಮನಿ, ವಾಸು ಬೈಗೊಟ್ಟಿ, ರವಿ ಯಳವಾರ ಮತ್ತಿತರರು ಹಾಜರಿದ್ದರು.
ಸಂಗೀತ, ಚಿತ್ರಕಲೆ ಉಚಿತ ಶಿಬಿರ ನಾಳೆಯಿಂದ
ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಯ ರಾಜೇಶ್ವರಿ ಕಲಾ ಕುಟೀರದ `ದಶಮಾನೋತ್ಸವ~ ಅಂಗವಾಗಿ 1ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಉಚಿತ ಚಿತ್ರಕಲೆ ಹಾಗೂ ಸಂಗೀತ ಶಿಬಿರ ಏರ್ಪಡಿಸಲಾಗಿದೆ.
ಇದೇ 15ರಿಂದ ಆರಂಭವಾಗುವ ಶಿಬಿರದಲ್ಲಿ ಚಿತ್ರಕಲೆ, ಪೇಂಟಿಂಗ್, ಕ್ರಾಫ್ಟ್ವರ್ಕ್, ಲಘು ಸಂಗೀತ, ಜಾನಪದ ಗೀತೆ, ಭಾವಗೀತೆ, ಭಕ್ತಿ ಗೀತೆ ತರಬೇತಿ ನೀಡಲಾಗುವುದು. ಪ್ರತಿ ಶನಿವಾರ ಮತ್ತು ಭಾನುವಾರ ತಬಲಾ ವಾದನ ತರಬೇತಿ ನೀಡಲಾಗುವುದು.
ಆಸಕ್ತರು ರಾಜೇಶ್ವರಿ ಕಲಾ ಕುಟೀರ, ಕೆ.ಸಿ. ರಾಣಿ ರಸ್ತೆ, ಸಿ.ಎಸ್. ಪಾಟೀಲ ಪ್ರೌಢಶಾಲೆ ಎದುರಿಗೆ, ಗದಗ, ದೂ. 08372- 253319 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.