ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಮೂಲಕ ಟ್ಯಾಕ್ಸಿಗಳು ಪ್ರಯಾಣಿಕಸ್ನೇಹಿಯಾಗುತ್ತಿವೆ. ಇಂತಹ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತಿರುವ ಟ್ಯಾಕ್ಸಿ ಕಂಪೆನಿಗಳ ಸಂಖ್ಯೆಯೂ ನಗರದಲ್ಲಿ ಹೆಚ್ಚುತ್ತಿದೆ. ನಗರದ `ಸವಾರಿ' ಕ್ಯಾಬ್ ಸೆಂಟರ್ ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಿಂದ ಆಂಡ್ರಾಯ್ಡ ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಿದೆ.
ಪ್ರಯಾಣಿಕರು ಆಯ್ಕೆ ಮಾಡಿ `ಸವಾರಿ'ಗೆ ನೀಡುವ ಒಂದು ಮೊಬೈಲ್ ಸಂಖ್ಯೆಗೆ ಅವರ ಪ್ರಯಾಣದ ಕ್ಷಣಕ್ಷಣದ ಮಾಹಿತಿ ರವಾನೆ ಮಾಡುವಂತಹ ಅಪ್ಲಿಕೇಶನ್ ಇದಾಗಿದೆ. ಪ್ರಯಾಣ ಶುರುವಾಗಿದ್ದು ಎಲ್ಲಿಂದ, ಯಾವ್ಯಾವ ಸ್ಥಳಗಳಲ್ಲಿ ಹಾದುಹೋಗುತ್ತಿದೆ, ಸದ್ಯ ಕ್ಯಾಬ್ ಎಲ್ಲಿದೆ ಎಂಬ ಚಿಕ್ಕಪುಟ್ಟ ಮಾಹಿತಿ ಕೂಡ ಪ್ರಯಾಣಿಕರು ನೀಡಿದ ಆತ್ಮೀಯರ ಮೊಬೈಲ್ ಸಂಖ್ಯೆಗೆ ರವಾನೆಯಾಗುತ್ತದೆ.
ಒಂದು ವೇಳೆ ಚಾಲಕನು ಪ್ರಯಾಣಿಕರೊಂದಿಗೆ ಅಸಭ್ಯವಾಗಿ ನಡೆದುಕೊಂಡರೆ `ಅಲರ್ಟ್' ಕೀ ಒತ್ತಿದರಾಯಿತು. ನೀವು ಕೊಟ್ಟ ಸಂಖ್ಯೆಗೆ ಒಂದು ಸಂದೇಶ ರವಾನೆಯಾಗುತ್ತದೆ. ಬುಕಿಂಗ್ ನಂತರ `ಸವಾರಿ' ಸೆಂಟರ್ನಲ್ಲಿ ಕ್ಯಾಬ್ನ ಮಾಹಿತಿ ಸಿಗಲಿದೆ. ದಿನದ 24 ಗಂಟೆ ಕೂಡ ಸೇವೆ ಪ್ರಯಾಣಿಕರಿಗೆ ಲಭ್ಯ.
`ಆಟೊಗಳಲ್ಲಿ ಇರುವಂತೆ ಚಾಲಕರ ಹೆಸರು, ಊರು, ನಂಬರ್ ಮುಂತಾದ ಮಾಹಿತಿಯಿರುವ ಡಿಸ್ಪ್ಲೇ ಕಾರ್ಡ್ ಅಳವಡಿಸಿರಬೇಕು ಎಂಬ ಸಾರಿಗೆ ಇಲಾಖೆಯ ಆದೇಶವನ್ನು ಪಾಲಿಸುವುದರ ಜತೆಗೆ `ಸವಾರಿ'ಯಲ್ಲಿ ಈ ವಿನೂತನ ಸೌಲಭ್ಯವೂ ಅನುಷ್ಠಾನಕ್ಕೆ ತರಲಾಗಿದೆ.
ನಗರವಲ್ಲದೇ ದೂರದ ಸ್ಥಳಗಳಿಗೂ ಈ ಸೌಲಭ್ಯ ಲಭ್ಯ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ವಿವರಿಸುತ್ತಾತೆ `ಸವಾರಿ ಕ್ಯಾಬ್ ಸೆಂಟರ್'ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗೌರವ ಅಗರ್ವಾಲ್.