ಪ್ರಸಿದ್ಧ ಪ್ರವಾಸಿ ಕೇಂದ್ರವಾದ ಹಳೇಬೀಡಿನ ಶಿಲ್ಪ ಕಲಾ ವೈಭವವನ್ನು ನೋಡಲು ಬರುವ ಪ್ರವಾಸಿಗರಿಗೆ ಅಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ. ಹಳೇಬೀಡಿನ ಸುತ್ತಲೂ ರಾಶಿ, ರಾಶಿ ಕಸ ಬಿದ್ದಿದೆ. ದೇವಾಲಯ ಪರಿಸರದಲ್ಲಿರುವ ಮುರುಕಲು ಪೆಟ್ಟಿಗೆ ಅಂಗಡಿಗಳು ಇಡೀ ಪ್ರದೇಶವನ್ನು ವಿಕಾರಗೊಳಿಸಿವೆ.
ಅಲ್ಲಿನ ರಸ್ತೆಗಳೂ ಹಾಳಾಗಿವೆ. ಹೇಳಿಕೊಳ್ಳುವಂತಹ ಒಂದೇ ಒಂದು ಊಟದ ಹೋಟೆಲ್ ಸಹ ಅಲ್ಲಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ.
ಹಳೇಬೀಡು ಹತ್ತಾರು ವರ್ಷಗಳಿಂದ ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ.
ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮಗಳ ಅಧಿಕಾರಿಗಳು ಮತ್ತು ಅಧಿಕಾರೇತರರು ಹಳೇಬೀಡು ಪ್ರವಾಸಿ ಕೇಂದ್ರದ ಬಗ್ಗೆ ಗಮನ ಹರಿಸುತ್ತಿಲ್ಲ.
ಕೇರಳ, ಗೋವಾ ಮತ್ತಿತರ ರಾಜ್ಯಗಳು ತಮ್ಮ ಪ್ರವಾಸಿ ತಾಣಗಳನ್ನು ಸೊಗಸಾಗಿ ಅಭಿವೃದ್ಧಿಪಡಿಸಿವೆ. ಕರ್ನಾಟಕದ ಪ್ರವಾಸಿ ತಾಣಗಳನ್ನು ನೋಡಿದರೆ ನಮ್ಮ ಸರ್ಕಾರದ ಬಗ್ಗೆ ಜಿಗುಪ್ಸೆ ಉಂಟಾಗುತ್ತದೆ.